ಮುಂಬೈ, ಜೂ 09 (DaijiworldNews/DB): ಮುಂಬೈ ನ್ಯಾಯಾಲಯವು ಒಂದು ದಿನದ ಮಟ್ಟಿಗೆ ಜಾಮೀನು ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ನಾಳೆ ನಡೆಯುವ ರಾಜ್ಯಸಭಾ ಚುನಾವಣೆಗೆ ಮಹಾರಾಷ್ಟ್ರದ ಆಡಳಿತಾರೂಢ ಎನ್ಸಿಪಿ ಪಕ್ಷದ ಶಾಸಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶ್ಮುಖ್ ಮತದಾನ ಮಾಡುವುದು ಅನುಮಾನವಾಗಿದೆ.
ಸದ್ಯ ಈ ಇಬ್ಬರೂ ಶಾಸಕರೂ ಬಂಧನದಲ್ಲಿದ್ದಾರೆ. ನಾಳೆ ನಡೆಯುವ ಚುನಾವಣೆಗೆ ಮತದಾನ ಮಾಡುವ ಉದ್ದೇಶದಿಂದ ಒಂದು ದಿನದ ಜಾಮೀನು ಕೋರಿ ನ್ಯಾಯಾಲಯಕ್ಕೆ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ನಾನೊಬ್ಬ ಚುನಾಯಿತ ಶಾಸಕನಾಗಿರುವ ಕಾರಣ ನನ್ನ ಕ್ಷೇತ್ರದ ಜನರಿಗಾಗಿ ರಾಜ್ಯಸಭೆಗೆ ಸದಸ್ಯನ ಆಯ್ಕೆ ಮಾಡುವುದು ನನ್ನ ಕರ್ತವ್ಯ. ಹೀಗಾಗಿ ಜಾಮೀನು ನೀಡಬೇಕೆಂದು ಮಲಿಕ್ ಅರ್ಜಿ ಸಲ್ಲಿಸಿದ್ದರು. ಆದರೆ, ಇಬ್ಬರಿಗೂ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಹೀಗಾಗಿ ಅವರು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 7 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿವಸೇನೆಯಿಂದ ಸಂಜಯ್ ರಾವುತ್, ಸಂಜಯ್ ಪವಾರ್ ಸ್ಪರ್ಧಿಸುತ್ತಿದ್ದು, ಪ್ರತಿಪಕ್ಷ ಬಿಜೆಪಿಯಿಂದ ಕೇಂದ್ರ ಸಚಿವ ಪೀಯೂಷ್ ಗೋಯಲ್, ಅನಿಲ್ ಬೊಂಡೆ ಮತ್ತು ಧನಂಜಯ್ ಮಹದಿಕ್ ಕಣಕ್ಕಿಳಿದಿದ್ದಾರೆ. ಆಡಳಿತಾರೂಢ ಮಿತ್ರ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ನಿಂದ ಪ್ರಫುಲ್ ಪಟೇಲ್ ಮತ್ತು ಇಮ್ರಾನ್ ಪ್ರತಾಪ್ ಗರ್ಹಿ ಸ್ಪರ್ಧಿಗಳಾಗಿದ್ದಾರೆ.