ಮುಂಬೈ, ಜೂ 09 (DaijiworldNews/DB): ಅಲ್ ಖೈದಾ ಉಗ್ರ ಸಂಘಟನೆಯಿಂದ ಆತ್ಮಾಹುತಿ ಬೆದರಿಕೆ ಪತ್ರ ಬಂದಿರುವುದಕ್ಕೆ ಬಿಜೆಪಿ ವಿರುದ್ದ ಶಿವಸೇನಾ ಸಂಸದ ಸಂಜಯ್ ರಾವತ್ ಕಿಡಿಕಾರಿದ್ದಾರೆ. ದೇಶದಲ್ಲಿ ಏನಾದರೂ ದುರಂತ ಸಂಭವಿಸಿದ್ದಲ್ಲಿ ಅದಕ್ಕೆ ಬಿಜೆಪಿಯೇ ಹೊಣೆ ಎಂದವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ದೇಶ ಸೌಹಾರ್ದದಿಂದಿರುವಾಗ ಬಿಜೆಪಿ ವಕ್ತಾರರು ಧರ್ಮಗಳ ನಡುವೆ ಘರ್ಷಣೆ ಬಯಸಿ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಉಗ್ರ ಸಂಘಟನೆಯೂ ಆತ್ಮಾಹುತಿ ದಾಳಿಯ ಬೆದರಿಕೆ ಹಾಕಿದೆ. ಒಂದು ವೇಳೆ ದೇಶದಲ್ಲಿ ಘಟನೆಗಳೇನಾದರೂ ನಡೆದಲ್ಲಿ ಅದಕ್ಕೆ ಬಿಜೆಪಿಯೇ ಹೊಣೆ. ಆ ಪಕ್ಷ ದೇಶದ ಸೌಹಾರ್ದವನ್ನು ನಾಶ ಮಾಡುತ್ತಿದೆ ಎಂದು ಜರೆದಿದ್ದಾರೆ.
ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆ ಬಳಿಕ ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಆಲ್ ಖೈದ್ ಬೆದರಿಕೆ ಪತ್ರ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ಮಾತನಾಡಿದ್ದಾರೆ.