ಜಾರ್ಖಂಡ್, ಜೂ 09 (DaijiworldNews/DB): ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಸ್ಥಳೀಯರು ಸುಟ್ಟು ಹಾಕಿದ ಘಟನೆ ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ.
ಮೊದಲು ಆರೋಪಿಗಳನ್ನು ಸಂತ್ರಸ್ತೆ ಕುಟುಂಬದವರು ಥಳಿಸಿದ್ದು, ಬಳಿಕ ಇಬ್ಬರನ್ನು ಜೀವಂತವಾಗಿ ಸುಟ್ಟು ಹಾಕಲು ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಓರ್ವ ಆರೋಪಿ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಾಲಕಿಯು ತನ್ನ ಕುಟುಂಬದ ಜೊತೆ ಪಕ್ಕದ ಗ್ರಾಮದಲ್ಲಿದ್ದ ಮದುವೆಯನ್ನು ಮುಗಿಸಿ ಹಿಂತಿರುಗುತ್ತಿದ್ದಳು. ಈ ವೇಳೆ ಬಸ್ ಅಲಭ್ಯತೆಯಿಂದಾಗಿ ಆ ದಾರಿಯಾಗಿ ಬೈಕಿನಲ್ಲಿ ಬಂದ ಇಬ್ಬರು ಯುವಕರಿಗೆ ಬಾಲಕಿಯನ್ನು ಮನೆಗೆ ಬಿಡುವಂತೆ ಆಕೆಯ ತಂದೆ ಕೇಳಿಕೊಂಡಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳೂ ಆಕೆಯನ್ನು ಮನೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅತ್ಯಾಚಾರ ಎಸಗಿದ್ದಾರೆ. ಘಟನೆ ಕುರಿತಂತೆ ಸಂತ್ರಸ್ತೆ ತನ್ನ ಮನೆಯವರಲ್ಲಿ ಹೇಳಿಕೊಂಡಿದ್ದು, ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆರೋಪಿಗಳಿಗೆ ಥಳಿಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.