ಕಾರವಾರ, ಜೂ 09 (DaijiworldNews/DB): ದಾಖಲೆರಹಿತವಾಗಿ 2 ಕೋಟಿ ರೂಪಾಯಿ ಹಣವನ್ನು ರೈಲಿನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಾರವಾರ ರೈಲ್ವೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಆತನ ಬಳಿಯಿದ್ದ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ.
ಮುಂಬೈನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಎಂಬಾತನೇ ಪೊಲೀಸರಿಗೆ ಸಿಕ್ಕಿ ಬಿದ್ದಾತ. ಈತ ಮುಂಬೈ-ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಾರವಾರದಲ್ಲಿ ತಪಾಸಣೆ ವೇಳೆ ಈತ ಟಿಕೆಟ್ರಹಿತವಾಗಿ ಸಂಚರಿಸುತ್ತಿರುವುದು ಗೊತ್ತಾಗಿ ರೈಲ್ವೇ ಪೊಲೀಸರು ದಂಡ ವಿಧಿಸಿದ್ದರು. ಈ ವೇಳೆ ಈತನ ಬಳಿ ಇದ್ದ ಬ್ಯಾಗ್ ಬಗ್ಗೆ ಅನುಮಾನಗೊಂಡ ರೈಲ್ವೇ ಪೊಲೀಸರು ಬ್ಯಾಗ್ ತಪಾಸಣೆ ಮಾಡಿದಾಗ ಬ್ಯಾಗ್ನಲ್ಲಿ 100 ಬಂಡಲ್ನ 2 ಕೋಟಿ ರೂ. ಹಣ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆ ವೇಳೆ ಈತ ಮುಂಬೈನ ಭರತ್ ಬಾಯ್ ಅಲಿಯಾಸ್ ಪಿಂಟೊ ಎಂಬುವವರ ಬಳಿ 15 ಸಾವಿರ ರೂ. ಸಂಬಳಕ್ಕೆ ದುಡಿಯುತ್ತಿದ್ದ. ಮಂಗಳೂರಿನ ರಾಜು ಎಂಬುವವರಿಗೆ ಹಣ ನೀಡಲು ಮಾಲಕರಿಂದ ಬ್ಯಾಗ್ ಪಡೆದು ಆತ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಎಂದು ಗೊತ್ತಾಗಿದೆ.