ಬೆಂಗಳೂರು, ಜೂ 09 (DaijiworldNews/MS): ರಾಜ್ಯಸಭೆ ಚುಣಾವಣೆ ರಂಗೇರುತ್ತಿದ್ದಂತೆಯೇ ಅತ್ತ ಜೆಡಿಎಸ್ ನಲ್ಲಿ ಅಗುವ ಅಡ್ಡ ಮತದಾನ ತಡೆಯಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಗ್ ಪ್ಲಾನ್ ಮಾಡಿದ್ದು, ರೆಸಾರ್ಟ್ ಗೆ ಜೆಡಿಎಸ್ ಶಾಸಕರನ್ನು ಶಿಫ್ಟ್ ಮಾಡಲಾಗಿದೆ. ಅತ್ತ ಕಡೆ ಬಿಜೆಪಿಯೂ ಯಾವುದೇ ಕಾರಣಕ್ಕೂ ತಮ್ಮ ಮತ ಅಸಿಂಧುವಾಗದಂತೆ ಎಚ್ಚರಿಕೆ ವಹಿಸಿ ಮತ ಹಕ್ಕು ಚಲಾಯಿಸುವಂತೆ ಶಾಸಕರಿಗೆ ಟ್ರೈನಿಂಗ್ ನೀಡಿದೆ.
ಎಷ್ಟೇ ಮಾತುಕತೆಯ ನಂತರವೂ ಕಾಂಗ್ರೆಸ್ ನಿಂದ ಸಹಕಾರ ಲಭ್ಯವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ಈಗ ತನ್ನ ಮತ ಕಾಯ್ದುಕೊಳ್ಳುವುದಕ್ಕೆ ಮುಂದಾಗಿದೆ. ನಿನ್ನೆ ರಾತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಂಡೆಪ್ಪ ಕಾಶಂಪೂರ್, ಹೆಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಬಾಲಕೃಷ್ಣ ಸೇರಿದಂತೆ 10 ಶಾಸಕರು ಬೆಂಗಳೂರಿನ ಹೊರ ವಲಯದ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ವಿದೇಶ ಪ್ರವಾಸದಲ್ಲಿದ್ದ ಶಾಸಕ ಗೌರಿ ಶಂಕರ್ ಅವರನ್ನೂ ತುರ್ತಾಗಿ ವಾಪಾಸ್ ಕರೆಸಿಕೊಳ್ಳಲಾಗಿದೆ. ಉಳಿದ ಶಾಸಕರು ಮಧ್ಯಾಹ್ನದ ಬಳಿಕ ರೆಸಾರ್ಟ್ ಗೆ ಹೋಗಲಿದ್ದಾರೆ ಎನ್ನಲಾಗಿದೆ.
ರೆಸಾರ್ಟ್ ನಲ್ಲಿ ಇಂದು ಸಂಜೆ ಜೆಡಿಎಸ್ ಶಾಸಕಾಂಗ ಸಭೆ ನಡೆಸಲಿದ್ದು, ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಬಳಿಕ ನಾಳೆ ಬೆಳಗ್ಗೆ ನೇರವಾಗಿ ವಿಧಾನಸೌಧಕ್ಕೆ ಶಾಸಕರು ಹೋಗಿ ಮತದಾನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ನಾಳೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.