ಕಾನ್ಪುರ, ಜೂ 09 (DaijiworldNews/DB): ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಬಂಧಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಸೈಫುಲ್ಲಾ, ಮೊಹಮ್ಮದ್ ನಸೀಮ್ ಮತ್ತು ಮೊಹಮ್ಮದ್ ಉಮರ್ ಎಂದು ಗುರುತಿಸಲಾಗಿದೆ. ಮೂವರೂ ಆರೋಪಿಗಳು 2019ರಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿ ಬಂಧಿಸಲ್ಪಟ್ಟಿದ್ದರು. ಬಳಿಕ ಬಿಡುಗಡೆಗೊಂಡಿದ್ದರು. ಬಂಧಿತರೆಲ್ಲರೂ ಗಲಭೆಯ ಪ್ರಮುಖ ಸಂಚುಕೋರ ಹಯಾತ್ ಝಾಫರ್ ಹಶ್ಮಿ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರವಾದಿ ಮಹಮ್ಮದ್ ವಿರುದ್ಧದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಕಾನ್ಪುರದಲ್ಲಿ ಗಲಭೆ ನಡೆಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪಿಗಳ ಬಂಧನವಾಗಿದೆ.