ದಾವಣಗೆರೆ, ಜೂ 08 (DaijiworldNews/SM): ರಾಜ್ಯದಲ್ಲಿರುವ ವಿಘಟನಕಾರಿ ಶಕ್ತಿಗಳ ಹೆಡೆಮುರಿ ಕಟ್ಟುವುದು ಇಲಾಖೆ ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೃಹ ಸಚಿವರು ರಾಜ್ಯದ ನಗರಗಳ ಕೆಲ ಭಾಗಗಳಲ್ಲಿ ವಿದೇಶಿ ಸಂಪರ್ಕದ ವ್ಯಕ್ತಿಗಳು ಈ ದೇಶದ ಏಕತೆ ಹಾಳು ಮಾಡಲು ಸಂಚು ರೂಪಿಸುತ್ತಿರುವ ಘಟನೆಗಳು ಜರುಗುತ್ತಿವೆ. ಆದ್ದರಿಂದ ನಿಮ್ಮ ಠಾಣಾ ವ್ಯಾಪ್ತಿಯ ಸಮಗ್ರ ಚಿತ್ರಣ ನಿಮಗಿರಬೇಕು, ನಿಮ್ಮ ಏರಿಯಾಗೆ ಬಂದಿರುವ ಹೊಸ ವ್ಯಕ್ತಿಗಳು ಅವರ ಚಲನವಲನ, ಅವರ ಪೂರ್ವಾಪರಗಳ ಮಾಹಿತಿ ನಿಮ್ಮಲ್ಲಿದ್ದರೆ ಅಹಿತಕರ ಘಟನೆಗಳನ್ನು ತಪ್ಪಿಸಬಹುದು ಎಂದರು.
ಕೆಲ ಏರಿಯಾಗಳಿಗೆ ಪೊಲೀಸರೇ ಹೋಗಲು ಹಿಂದು ಮುಂದು ನೋಡುತ್ತಾರೆ. ಸೂಕ್ಷ್ಮ ಪ್ರದೇಶಗಳೆಂಬ ಸಬೂಬು ಹೇಳುತ್ತಾರೆ. ಸೂಕ್ಷ್ಮ ಪ್ರದೇಶಗಳಿಗೆ ಹೋಗಬಾರದು ಅನ್ನುವುದಕ್ಕಿಂತ ನಾವಿದ್ದೇವೆ ಅಲ್ಲಿಗೆ ಹೋಗಿ ಎಂದು ಧೈರ್ಯ ತುಂಬಬೇಕು, ಪೊಲೀಸರೇ ಹೀಗಾದರೆ ದೇಶದ ಶಾಂತಿ ಸುವ್ಯವಸ್ಥೆ ಕಾಪಾಡುವವರು ಯಾರು? ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು.