ನವದೆಹಲಿ, ಜೂ 08 (DaijiworldNews/SM): ದೇಶ ವಿದೇಶಗಳಲ್ಲಿ ಪ್ರವಾದಿ ಮೊಹಮ್ಮದ್ ನಿಂಧನೆಗೆ ಖಂಡನೆ ತೀವ್ರಗೊಂಡಿದೆ. ಮತ್ತೊಂದೆಡೆ ಈಗಾಗಲೇ ಆಕ್ಷೇಪಾರ್ಹ ಹೇಳಿಕೆ ನೀಡಿದವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ. ಆದರೂ, ವಿರೋಧ ಮಾತ್ರ ಹೆಚ್ಚಾಗುತ್ತಿದೆ. ಆದರೆ, ಇದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ ಎಂದು ರಾಶ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಒಐಸಿ ಹಾಗೂ ಜಿಸಿಸಿಯ ಹೊರತಾಗಿ 15 ರಾಷ್ಟ್ರಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪ್ರಹಸನದ ಪರಿಣಾಮ ಆಡಳಿತಾರೂಢ ಬಿಜೆಪಿ ಪಕ್ಷ ತನ್ನ ಸದಸ್ಯರಿಗೆ "ಯಾವುದೇ ಧರ್ಮದ ಬಗ್ಗೆಯೂ ಮಾತನಾಡಬಾರದು" ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ರವಾನಿಸಿದೆ.
ಭಾರತದ ಗುಪ್ತಚರ ಸಂಸ್ಥೆಗಳ ಪ್ರಕಾರ ಮುಸ್ಲಿಮ್ ರಾಷ್ಟ್ರಗಳಿಂದ ವ್ಯಕ್ತವಾಗುತ್ತಿರುವ ಪ್ರತಿಭಟನೆ ಹಿಂದೆ ಭಾರತ ವಿರೋಧಿ ಹ್ಯಾಷ್ ಟ್ಯಾಗ್ ಕೆಲಸ ಮಾಡಿದ್ದು, ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
ಭಾರತ ವಿರೋಧಿ ಹ್ಯಾಷ್ ಟ್ಯಾಗ್ ಗಾಗಿ 750 ದೃಢೀಕರಿಸಿದ ವಿಶಿಷ್ಟ ಬೋಟ್ ಖಾತೆಗಳು ಪತ್ತೆಯಾಗಿದ್ದು, ಪಾಕಿಸ್ತಾನದ ಪಿಟಿಐ ಪಕ್ಷದ ಬೆಂಬಲ ಹೊಂದಿರುವ ಈ ಖಾತೆಗಳಿಂದಲೇ ಭಾರತ ವಿರೋಧಿ ಹ್ಯಾಷ್ ಟ್ಯಾಗ್ ಅಭಿಯಾನ ನಡೆದಿತ್ತು ಎಂದು ಗುಪ್ತಚರ ಇಲಾಖೆ ಹೇಳಿದೆ.