ಮೈಸೂರು, ಜೂ 08 (DaijiworldNews/DB): ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷಗಳಿಗೆ ನಾವು ಆಫರ್ ನೀಡಿಲ್ಲ. ಮೂರು ಸ್ಥಾನ ಗೆಲ್ಲಲು ಬೇಕಾದ ಮತಗಳು ನಮ್ಮಲ್ಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ನವರು ಏನು ಮಾಡುತ್ತಾರೆಂಬುದು ನನಗೆ ಗೊತ್ತಿಲ್ಲ. ಆದರೆ ನಾವು ಯಾರಿಗೂ ಆಫರ್ ನೀಡಿಲ್ಲ. ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುವುದು ನಿಶ್ಚಿತ ಎಂದರು.
ಮೇಕೆದಾಟು ಯೋಜನೆ ತಡೆ ಹಿಡಿಯುವ ಕುರಿತು ಕೇಂದ್ರಕ್ಕೆ ಸೂಚನೆ ನೀಡಲು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ನ್ಯಾಯಯುತವಾದ ಕ್ರಮವಲ್ಲ. ನಮಗೆ ಸುಪ್ರೀಂಕೋರ್ಟ್ ನೀಡಿದ ನೊಟೀಸ್ಗೆ ಸಮರ್ಥ ಉತ್ತರ ನೀಡಿದ್ದೇವೆ. ಕಾವೇರಿ ನದಿಗೆ ಸಂಬಂಧಪಟ್ಟಂತೆ ಜಾರಿಗೊಳಿಸಬಹುದಾದ ಮತ್ತು ಬೇಡವಾದ ಯೋಜನೆಗಳನ್ನು ನಿರ್ಧರಿಸುವ ಅಧಿಕಾರ ಸುಪ್ರೀಂಕೋರ್ಟ್ ಆದೇಶದನ್ವಯ ರಚನೆಯಾದ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರಕ್ಕೆ ಮಾತ್ರ ಇದೆ ಎಂದು ತಿಳಿಸಿದರು.
ಲೋಕಾಯುಕ್ತರ ನೇಮಕಾತಿ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಶೀಘ್ರ ನೇಮಕಾತಿ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.