ಬೆಂಗಳೂರು, ಜೂ 07(DaijiworldNews/MS): ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಲ್ಲೆ , ಮುಖಕ್ಕೆ ಕಪ್ಪು ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಹೈಗ್ರೌಂಡ್ಸ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಹೆಬ್ಬಾಳ ನಿವಾಸಿ ಉಮಾದೇವಿ, ಶ್ರೀ ಶಿವಶಕ್ತಿ ಮಹಿಳಾ ಸಂಘ ಹಾಗೂ ಶ್ರೀ ಶಿವಶಕ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಉಮಾದೇವಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಈ ಹಿಂದೆ ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಹಾಗೂ ಶಿವಕುಮಾರ್ ಎಂಬುವವರನ್ನು ವಿಚಾರಣೆಗೊಳಪಡಿಸಿದ್ದರು. ತನಿಖೆ ವೇಳೆ ಉಮಾದೇವಿ ಕೈವಾಡ ಕಂಡು ಬಂದಿದೆ. ಹಾಗಾಗಿ, ಪೊಲೀಸರು ಉಮಾದೇವಿಯನ್ನ ಬಂಧಿಸಿದ್ದಾರೆ.
ಮೇ 30 ರಂದು ಪತ್ರಿಕಾಗೋಷ್ಠಿ ನಡೆಸಲು ಪ್ರೆಸ್ ಕ್ಲಬ್ ಬಂದಿದ್ದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಟಿಕಾಯತ್ ಮೇಲೆ ಹಲ್ಲೆ ನಡೆಸಲಾಗಿತ್ತು.ಆರೋಪಿಗಳು ಕೋಡಿಹಳ್ಳಿ ಚಂದ್ರಶೇಖರ್ ಗೆ ಮಸಿ ಹಾಕೋಫ್ಲಾನ್ ಹಾಕಿದ್ದು ಆದರೆ ಪ್ರೇಸ್ ಮೀಟ್ ಗೆ ಕೋಡಿಹಳ್ಳಿ ಚಂದ್ರಶೇಖರ್ ಬಂದಿರಲಿಲ್ಲ. ಹೀಗಾಗಿ ಟಿಕಾಯತ್ ಮೇಲೆ ಮಸಿ ಎಸೆದರೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಗಬಹುದು ಎಂದು ಕೃತ್ಯ ನಡೆಸಿದ್ದಾರೆ ಎಂದು ತಪ್ಪೊಪ್ಪಿಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕೃತ್ಯವನ್ನು ಉಮಾದೇವಿ ಮುಂದೆ ನಿಂತು ಮಾಡಿಸಿದ್ದು ಎಂದು ಹೇಳಲಾಗುತ್ತಿದ್ದು ಉಮಾದೇವಿ ಮನೆ ಮೇಲೆ ಶನಿವಾರ ದಾಳಿ ನಡೆಸಿ ಪೊಲೀಸರಿಗೆ ಮಾರಾಕಾಸ್ತ್ರಗಳು ದೊರೆತಿವೆ. ಸದ್ಯ ಉಮಾದೇವಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ.