ಶಿವಮೊಗ್ಗ,ಜೂ 03 (DaijiworldNews/HR): ಶಿವಮೊಗ್ಗದಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಅಪರಾಧ ಪ್ರಕರಣದಲ್ಲಿ ಶಿಕ್ಷೆಯಾದರೂ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಪಡೆದು ಓಡಾಡುತ್ತಿದ್ದ ಹರ್ಷದ್(30) ಎಂಬಾತನೇ ಗುಂಡಿನ ದಾಳಿಗೆ ಒಳಗಾದವ ಆರೋಪಿಯಾಗಿದ್ದಾನೆ.
ಹರ್ಷದ್ ಸಾರ್ವಜನಿಕರಿಗೆ ಬೆದರಿಕೆ ಹಾಕಿ ದರೋಡೆಗೆ ಯತ್ನಿಸುತ್ತಿದ್ದ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ್ದು, ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ.
ಇನ್ನು ಈ ವೇಳೆ ತುಂಗಾನಗರ ಪಿಐ ಮಂಜುನಾಥ್ ತಮ್ಮ ಮತ್ತು ಸಿಬ್ಬಂದಿಗಳ ಆತ್ಮರಕ್ಷಣೆಗಾಗಿ ಆರೋಪಿ ಬಲಗಾಲಿಗೆ ತಮ್ಮ ಸೇವಾ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.