ಬೆಂಗಳೂರು, ಜೂ 02 (DaijiworldNews/HR): ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಸಿಂಗ್ ಟಿಕಾಯತ್ ಕನ್ನಡದಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಿರುವುದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಟಿಕಾಯತ್ ಮೇಲೆ ಕಪ್ಪು ಬಣ್ಣ ಬಳಿದು ಹಲ್ಲೆ ನಡೆಸಲಾಗಿದ್ದು ರಕ್ಷಣಾ ವೇದಿಕೆಯ ಅಧ್ಯಕ್ಷ ಭರತ್ ಶೆಟ್ಟಿ, ಶಿವಕುಮಾರ್ ಮತ್ತು ಪ್ರದೀಪ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದರು.
ಇನ್ನು ದಾಳಿ ನಡೆಸುವಾಗ ಹಾಗೂ ಪೊಲೀಸರು ಕರೆದೊಯ್ಯುವಾಗ ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿಕೊಂಡಿದ್ದು, ತನಿಖಾಧಿಕಾರಿಗಳು ಈ ಬೆಳವಣಿಗೆಯನ್ನು ಪೂರ್ವಯೋಜಿತ ಕೃತ್ಯವೆಂಬಂತೆ ಪರಿಗಣಿಸಿದ್ದು, ಆರೋಪಿಗಳ ಹೇಳಿಕೆ ದಾರಿತಪ್ಪಿಸುವಂತಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ಆರೋಪಿಗಳನ್ನು 6 ದಿನಗಳ ಕಸ್ಟಡಿಗೆ ತೆಗೆದುಕೊಂಡಿದ್ದು, ತನಿಖೆಯಿಂದ ಆರೋಪಿಗಳ ಹಿಂದಿನ ಅಪರಾಧ ಇತಿಹಾಸವೂ ಬಯಲಾಗಿದೆ.
ಶಿವಕುಮಾರ್ ವೇದಿಕೆಯ ಮೇಲೆ ವಾಗ್ದಾಳಿ ನಡೆಸಿ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ನಂತರ ಇತರ ರೈತ ಮುಖಂಡರ ಮೇಲೂ ಹಲ್ಲೆಗೆ ಯತ್ನಿಸಿದ್ದರು. ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಮತ್ತೊಬ್ಬ ಆರೋಪಿ ಕ್ಯಾಬ್ ಚಾಲಕ ಪ್ರದೀಪ್ ಅವರು ರಾಕೇಶ್ ಟಿಕಾಯತ್ ಹಾಗೂ ಇತರರ ಮೇಲೆ ಕಪ್ಪು ಬಣ್ಣ ಎರಚಿದ್ದು, ಆ ದಿನ ಕಾರ್ಯಕ್ರಮದ ವೇಳೆ ಆರೋಪಿಗಳ ಜೊತೆ ಕಾಣಿಸಿಕೊಂಡಿದ್ದ ಮಹಿಳೆಯರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.