ಬೆಳಗಾವಿ, ಜೂ 01 (DaijiworldNews/DB): ಕಾರ್ಮಿಕ ಮಹಿಳೆಯೊಬ್ಬರು ಬೆಳಗಾವಿ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಲು ಹಾಕಿದ್ದು, ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶಾವಿಗೆ ತೆರವುಗೊಳಿಸಿದ್ದಾರೆ. ಅಲ್ಲದೆ ಶಾವಿಗೆ ಒಣಗಲು ಹಾಕಿದ ಮಹಿಳೆಯನ್ನು ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ.
ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲವ್ವ ಎಂಬುವವರು ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಟ್ಟೆ ಹಾಸಿ, ಶಾವಿಗೆ ಒಣಗಿಸಲು ಹಾಕಿದ್ದರು.
ಸುವರ್ಣ ವಿಧಾನಸೌಧದಲ್ಲಿ ಏಜೆನ್ಸಿ ಮೂಲಕ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲವ್ವ ಅವರು ಬೇರೊಂದು ಮಹಿಳೆಯಿಂದ ಶಾವಿಗೆ ಪಡೆದುಕೊಂಡಿದ್ದು, ಶಾವಿಗೆ ಕೆಡದಿರಲೆಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಟ್ಟೆ ಹಾಸಿ, ಶಾವಿಗೆ ಒಣಗಿಸಲು ಹಾಕಿದ್ದರು. ಬೆಳಗ್ಗೆ ಸೈಕ್ಲಿಂಗ್ ಹೋಗುವವರು ಇದನ್ನು ಫೋಟೋ ತೆಗೆದು ವಾಟ್ಸಾಪ್ನಲ್ಲಿ ಹರಿಬಿಟ್ಟಿದ್ದಾರೆ. ಚಿತ್ರಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶಾವಿಗೆಯನ್ನು ತೆರವು ಮಾಡಿದ್ದಾರೆ. ಅಲ್ಲದೆ ಮಲ್ಲವ್ವ ಅವರನ್ನು ಕೆಲಸದಿಂದ ಬಿಡುಗಡೆ ಮಾಡಿದ್ದಾರೆ.
ವಿಷಯದ ಗಂಭೀರತೆ ಬಗ್ಗೆ ಅರಿವಿರದ ಮಲ್ಲವ್ವ ಶಾವಿಗೆ ತಂಪಿನ ವಾತಾವರಣದಿಂದ ಕೆಡಬಾರದೆಂಬ ಕಾರಣಕ್ಕೆ ಮೆಟ್ಟಿಲುಗಳ ಮೇಲೆ ಒಣ ಹಾಕಿದ್ದರು. ಆದರೆ, ಇದರಿಂದಾಗಿ ಅವರು ಕೆಲಸವನ್ನೇ ಕಳೆದುಕೊಳ್ಳಬೇಕಾಗಿ ಬಂತು.
ಈ ಸೌಧಕ್ಕೆ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ಹಲವು ಬಾರಿ ಒತ್ತಾಯಗಳು ಕೇಳಿ ಬಂದಿದ್ದರೂ ಅದು ಈಡೇರಿರಲಿಲ್ಲ. ಅಲ್ಲದೆ ವರ್ಷಕ್ಕೊಮ್ಮೆ, ಎರಡು ವರ್ಷಕ್ಕೊಮ್ಮೆ ಇಲ್ಲಿ ಚಳಿಗಾಲದ ಅಧಿವೇಶನ ನಡೆಯುವುದು ಬಿಟ್ಟರೆ ಉಳಿದಂತೆ ಇದು ಭೂತಬಂಗಲೆಯಂತೆಯೇ ಇರುತ್ತದೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳದ ಕಾರಣ, ಈ ಸೌಧ ಶಾವಿಗೆ ಒಣ ಹಾಕಲು ಬಳಕೆಯಾಗುತ್ತಿದೆ ಎಂದು ಜನ ವ್ಯಂಗ್ಯವಾಡುತ್ತಿದ್ದರು.