ಶಿಮ್ಲಾ, ಜೂ 01 (DaijiworldNews/DB): ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಶೂನ್ಯವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳು ನಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿಮ್ಲಾದಲ್ಲಿ ರ್ಯಾಲಿಗೂ ಮೊದಲು ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ಮಂಗಳವಾರ ಸಂವಾದ ನಡೆಸಿದರು. 2014ರ ಮೊದಲು ಭ್ರಷ್ಟಾಚಾರವು ಸರ್ಕಾರದ ಭಾಗವೇ ಆಗಿತ್ತು. ವಿವಿಧ ಹಗರಣಗಳಿಂದಲೇ ಆ ಸರ್ಕಾರ ಸುದ್ದಿಯಾಗಿತ್ತು. ಆದರೆ ಈಗ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆದು ಅಭಿವೃದ್ದಿ ಯೋಜನೆಗಳಿಗಷ್ಟೇ ಆದ್ಯತೆ ನೀಡಲಾಗುತ್ತಿದೆ. ಬಡತನವೂ ಕಡಿಮೆಯಾಗಿರುವುದನ್ನು ಅಂತಾರಾಷ್ಟ್ರೀಯ ಏಜೆನ್ಸಿಗಳು ಕೂಡಾ ಒಪ್ಪಿಕೊಳ್ಳುತ್ತಿವೆ ಎಂದರು.
ಬಡವರಿಗೆ ಅರ್ಹವಾಗಿದ್ದ ವಿವಿಧ ಯೋಜನೆಗಳನ್ನುಅಕ್ರಮವಾಗಿ ಬಳಸಿಕೊಳ್ಳುತ್ತಿದ್ದ ಒಂಬತ್ತು ಕೋಟಿ ನಕಲಿ ಫಲಾನುಭವಿಗಳನ್ನು ಪಟ್ಟಿಯಿಂದ ಕೈ ಬಿಟ್ಟಿದ್ದೇವೆ. ಯೋಜನೆಯ ಪ್ರಯೋಜನವನ್ನು ಅರ್ಹರಿಗೆ ನೇರವಾಗಿ ತಲುಪಿಸುವ ಕೆಲಸ ಮಾಡಲಾಗಿದೆ. ನೇರ ನಗದು ವರ್ಗಾವಣೆ ಮೂಲಕ 22 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
80 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತು 21,000 ಕೋಟಿ ರೂ. ಅನುದಾನವನ್ನು ಈ ವೇಳೆ ಬಿಡುಗಡೆಗೊಳಿಸಿದರು.