ಬೆಂಗಳೂರು, ಮೇ 31 (DaijiworldNews/MS): ರೈತ ನಾಯಕರ ಮೇಲಿನ ಹಲ್ಲೆ ಬಿಜೆಪಿಯ ಭಯೋತ್ಪಾದನಾ ಕೃತ್ಯ. ಭಯೋತ್ಪಾದನಾ ಕೃತ್ಯ ಎಸಗುವವರೆಲ್ಲ 'ಮೋದಿ ಮೋದಿ' ಎನ್ನುತ್ತಿದ್ದಾರೆ. ಭಯೋತ್ಪಾದಕರಿಗೆ, ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ ಮಾಡುವವರಿಗೆಲ್ಲ ಮೋದಿಯವರೇ ಆದರ್ಶವೇ?ಎಂದು ಪ್ರಶ್ನಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, 'ಬಿಜೆಪಿ ಪಕ್ಷ ತನ್ನ ಕಾರ್ಯಕರ್ತರ ಮೂಲಕ ರೈತ ನಾಯಕರ ಮೇಲೆ ದಾಳಿ ನಡೆಸಿ ಇಡೀ ರೈತ ಸಮುದಾಯಕ್ಕೆ ಅವಮಾನಿಸಿದೆ. ಗೃಹಸಚಿವರೇ, ತಾವು ನಿದ್ದೆ ಮಾಡ್ತಿದೀರಾ ಅಥವಾ ದಿವ್ಯಾ ಹಾಗರಗಿಯ ಸೌಖ್ಯ ವಿಚಾರಿಸಲು ಹೋಗಿದ್ದೀರಾ? ಅನರ್ಹ ಗೃಹಮಂತ್ರಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಮಕ್ಕಳಾಟಿಕೆಯಂತಾಗಿದೆ ಎಂದು ಕಿಡಿಕಾರಿದೆ.
ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪುಡಿ ಪೋಕರಿಗಳ ಕೈಗೆ ನೀಡಿದೆಯೇ ಸರ್ಕಾರ? ಶಾಲೆಗೆ ನುಗ್ಗುತ್ತಿದ್ದಾರೆ, ಅಂಗಡಿಗಳನ್ನು ಧ್ವಂಸ ಮಾಡುತ್ತಾರೆ, ಮೈಕ್ ಏರಿಸಿ ಸವಾಲೆಸೆಯುತ್ತಾರೆ, ರೈತ ನಾಯಕರ ಮೇಲೆ ಹಲ್ಲೆ ಮಾಡುತ್ತಾರೆ. ಕಾನೂನಿನ ಭಯ ಇಲ್ಲದಾಗಿದೆ ಎಂದರೆ ಸರ್ಕಾರದ ದೌರ್ಭಲ್ಯವೋ ಅಥವಾ ಕುಮ್ಮಕ್ಕೊ? ಎಲ್ಲಿದ್ದಾರೆ ಗೃಹಸಚಿವರು? ಎಂದು ವಾಗ್ದಾಳಿ ನಡೆಸಿದೆ.