ವಿಜಯಪುರ, ಮೇ 28 (DaijiworldNews/DB): ಮೆದುಳು ಮತ್ತು ಬಾಯಿಗೆ ಲಿಂಕ್ ಇಲ್ಲದವರಿಗೆ ಉತ್ತರ ಕೊಡುವ ಅಗತ್ಯ ನನಗಿಲ್ಲ. ಆಧಾರರಹಿತವಾಗಿ ಮಾತನಾಡುವ ಯತ್ನಾಳ್ ಅವರಿಗೆ ಉತ್ತರ ಕೊಡುತ್ತಾ ಹೋಗಲು ನನಗೆ ಸಮಯವಿಲ್ಲ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ತೋಚಿದ್ದನ್ನು ಹೇಳುವ ಪ್ರವೃತ್ತಿ ಯತ್ನಾಳ್ ಅವರದ್ದು. ರಾಜಕೀಯ ಸೂಕ್ಷ್ಮತೆ ಅರಿವಿಲ್ಲದವರ ಬಗ್ಗೆ ಮಾತನಾಡುವುದೂ ವ್ಯರ್ಥ. ಮಾತನಾಡುವಾಗ ಕನಿಷ್ಠ ಸತ್ಯವಾದರೂ ಇರಬೇಕು. ಯಾರನ್ನೇ ಆದರೂ ತುಳಿಯುವ ಪ್ರಯತ್ನ ಮಾಡಿದರೆ, ಉಡಾಫೆ ಮಾತನಾಡಿದರೆ ಮತದಾರರೇ ಅವರಿಗೆ ಬುದ್ದಿ ಕಲಿಸಲಿದ್ದಾರೆ ಎಂದರು.
ಬಿಜೆಪಿ ಸೇರ್ಪಡೆಯಾಗುವಂತೆ ನನ್ನನ್ನು ಯಾರೂ ಆ ಪಕ್ಷದಿಂದ ಸಂಪರ್ಕಿಸಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಯಾರದ್ದೋ ಮಾತು ಕೇಳಿಕೊಂಡು ನನ್ನ ವ್ಯಕ್ತಿತ್ವವನ್ನು ತೇಜೋವಧೆ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಆಧಾರರಹಿತವಾಗಿ ಮಾತನಾಡುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ. ಈ ರೀತಿಯಾಗಿ ಮಾತನಾಡಿದ್ದಕ್ಕೆ ಅವರು ಇಂದು ಎಲ್ಲಿದ್ದಾರೆ ಎಂಬುದನ್ನು ಅರಿತುಕೊಳ್ಳಲಿ ಎಂದು ಇದೇ ವೇಳೆ ಯತ್ನಾಳ್ ವಿರುದ್ದ ಯಶವಂತ್ರಾಯಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣ ನಿಂತ ನೀರಲ್ಲ. ಕೆಲವೇ ಸಮಯದಲ್ಲಿ ಚುನಾವಣೆ ಘೋಷಣೆಯಾಗಲಿದೆ. ಆಗ ಯಾರ್ಯಾರು ಎಲ್ಲಿಲ್ಲಿ ಇರುತ್ತಾರೆಯೋ ಎಂಬುದನ್ನು ನೋಡೋಣ. ಅಲ್ಲಿಂದಲೇ ರಾಜಕಾರಣ ಮಾಡೋಣ ಎಂದರು.