ಮುಂಬೈ, ಮೇ 25 (DaijiworldNews/DB): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ಪ್ರತಿ ತಿಂಗಳು ಆತ ತನ್ನ ಒಡ ಹುಟ್ಟಿದವರಿಗೆ 10 ಲಕ್ಷ ರೂ. ಕಳುಹಿಸುತ್ತಾನೆ ಎಂಬುದಾಗಿ ಸಾಕ್ಷಿದಾರರಿಬ್ಬರು ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಹೇಳಿಕೆ ನೀಡಿದ್ದಾರೆ.
ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ನೆಲೆಸಿರುವ ಬಗ್ಗೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಾಕ್ಷಿದಾರರೊಬ್ಬರು ಹೇಳಿದ್ದಾರೆ. ಅಲ್ಲದೆ ಆತ ತನ್ನ ಒಡಹುಟ್ಟಿದವರಿಗೆ 10 ಲಕ್ಷ ರೂ.ಗಳನ್ನು ಪ್ರತಿ ತಿಂಗಳು ಕಳುಹಿಸುತ್ತಿರುವ ಬಗ್ಗೆ ಇನ್ನೊಬ್ಬ ಸಾಕ್ಷಿದಾರ ಇಡಿಗೆ ಹೇಳಿಕೆ ನೀಡಿದ್ದಾರೆ. ಅಲಿಶಾಹ್ ಪಾರ್ಕರ್ ಹಾಗೂ ಖಾಲಿದ್ ಉಸ್ಮಾನ್ ಶೇಖ್ ಈ ವಿಚಾರವನ್ನು ಇಡಿ ಮುಂದೆ ಹೇಳಿರುವ ಸಾಕ್ಷಿದಾರರು. ದಾವೂದ್ ಇಬ್ರಾಹಿಂ ಆಸ್ತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ನವಾಬ್ ಮಲಿಕ್ ವಿರುದ್ಧ ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ಈ ಇಬ್ಬರು ಸಾಕ್ಷಿದಾರರ ಹೇಳಿಕೆಗಳನ್ನು ದಾಖಲು ಮಾಡಲಾಗಿದೆ.
ಅಲಿಶಾಹ್ ಪಾರ್ಕರ್ ಎಂಬಾತ ದಾವೂದ್ನ ಸಹೋದರಿ ಹಸೀನಾ ಪಾರ್ಕರ್ನ ಮಗನಾಗಿದ್ದು, ಸೋದರ ಮಾವ (ದಾವೂದ್ ಇಬ್ರಾಹಿಂ) 1986ರ ಸುಮಾರಿಗೆ ಮುಂಬೈನ ದಂಬರ್ವಾಲಾ ಕಟ್ಟಡದ 4ನೇ ಮಹಡಿಯಲ್ಲಿ ವಾಸವಾಗಿದ್ದರು. ಆ ಬಳಿಕ ಅವರು ಪಾಕ್ನ ಕರಾಚಿಯಲ್ಲಿ ನೆಲೆಸಿದ್ದಾರೆಂಬುದಾಗಿ ಕುಟುಂಬಿಕರಿಂದ ತಿಳಿಯಲ್ಪಟ್ಟಿದ್ದೇನೆ. ಆದರೆ ನಾನಾಗಲೀ, ನನ್ನ ಕುಟುಂಬದವರಾಗಲೀ ಅವರೊಂದಿಗೆ ಸಂಪರ್ಕದಲ್ಲಿ ಇಲ್ಲ. ಆದರೆ ಈದ್, ದೀಪಾವಳಿ ಅಥವಾ ಇತರ ಹಬ್ಬಗಳ ವೇಳೆ ನನ್ನ ಪತ್ನಿ ಮತ್ತು ಸಹೋದರಿಯರ ಜೊತೆ ದಾವೂದ್ ಪತ್ನಿ ಮಾತನಾಡುತ್ತಾರೆ ಎಂದು ಇ.ಡಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ದಾವೂದ್ ತನ್ನ ಜನರ ಮೂಲಕ ಸಹೋದರರಿಗೆ ಹಣ ಕಳುಹಿಸುತ್ತಾರೆ. ತಾನು ಪ್ರತೀ ತಿಂಗಳು ಅವರಿಂದ10 ಲಕ್ಷ ರೂ. ಪಡೆಯುತ್ತೇನೆ ಎಂಬುದಾಗಿ ದಾವೂದ್ ಸಹೋದರ ಕಸ್ಕರ್ ಹೇಳಿದ್ದಾಗಿ ಇನ್ನೊಬ್ಬ ಸಾಕ್ಷಿದಾರ ಖಾಲಿದ್ ಉಸ್ಮಾನ್ ಶೇಖ್ ಹೇಳಿಕೆ ನೀಡಿದ್ದಾರೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಭಯೋತ್ಪಾದಕ ದಾವೂದ್ ಇಬ್ರಾಹಿಂ ಮತ್ತು ಅವರ ಸಹಚರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಎಫ್ಐಆರ್ ದಾಖಲಿಸಿದೆ. ಈ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.