ಬೆಂಗಳೂರು, ಮೇ 25 (DaijiworldNews/DB): ಬಿಜೆಪಿಯಲ್ಲಿನ ’ಸಂತೋಷ ಕೂಟ’ ಬಿ.ಎಸ್.ಯಡಿಯೂರಪ್ಪ ಅವರನ್ನಲ್ಲದೇ ಇಡೀ ಕುಟುಂಬವನ್ನೇ ವನವಾಸಕ್ಕೆ ಕಳುಹಿಸಲು ಯಶಸ್ವಿಯಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸಿಎಂ ಕುರ್ಚಿಯಿಂದ ಇಳಿಸುವಾಗ 'ಕಣ್ಣೀರು', ವಿಜಯೇಂದ್ರಗೆ ಟಿಕೆಟ್ ನಿರಾಕರಿಸುವಾಗ 'ರಕ್ತಕಣ್ಣೀರು'. ಇದು ಬಿಜೆಪಿಯು ಯಡಿಯೂರಪ್ಪನವರಿಗೆ ನೀಡುತ್ತಿರುವ ಋಣ ಸಂದಾಯದ ಕೊಡುಗೆಗಳು ಎಂದು ಬರೆದುಕೊಂಡಿದೆ.
ಬಿಜೆಪಿಯಲ್ಲಿನ ಸಂತೋಷ ಕೂಟ ಬಿಎಸ್ವೈ ಮಾತ್ರವಲ್ಲದೆ ಅವರ ಇಡೀ ಕುಟುಂಬವನ್ನೇ ವನವಾಸಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಕುಟುಕಿದೆ. ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಿರುವುದರ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಕೈವಾಡವಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಈ ಟ್ವೀಟ್ ಮಾಡಿದೆ.