ಕಾಶ್ಮೀರ, ಮೇ 24(DaijiworldNews/SM): ನಟ ವಿಜಯ್ ದೇವರಕೊಂಡ ಹಾಗೂ ನಟಿ ಸಮಂತಾ ಅಭಿನಯದ ಖುಷಿ ಸಿನಿಮಾದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಸಾಹಸ ದೃಶ್ಯವೊಂದರ ಶೂಟಿಂಗ್ ಸಮಯದಲ್ಲಿ ವಾಹನವು ನದಿಗೆ ಬಿದ್ದು ನಟ ವಿಜಯ್ ದೇವರಕೊಂಡ, ಸಮಂತಾ ಗಾಯಗೊಂಡಿದ್ದಾರೆ. ಸದ್ಯ ಇಬ್ಪರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
`ಖುಷಿ’ ಚಿತ್ರಂಡ ಕೆಲ ದಿನಗಳ ಹಿಂದೆಯೇ ಕಾಶ್ಮೀರದಲ್ಲಿ ಬೀಡು ಬಿಟ್ಟಿತ್ತು. ಚಿತ್ರೀಕರಣಕ್ಕಾಗಿ ವಿಜಯ್ ಹಾಗೂ ಸಮಂತಾ, ನದಿಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗದ ಮೇಲೆ ವಾಹನವನ್ನು ಓಡಿಸಬೇಕಾಗಿತ್ತು. ಆಗ ದುರದೃಷ್ಟವಶಾತ್, ವಾಹನವು ನದಿಗೆ ಬಿದ್ದು, ವಾಹನದಲ್ಲಿದ್ದ ಸಮಂತಾ ಮತ್ತು ವಿಜಯ್ ಬೆನ್ನಿಗೆ ಗಾಯವಾಗಿದೆ. ಶ್ರೀನಗರದ ದಾಲ್ ಲೇಕ್ ಬಳಿ ಶೂಟಿಂಗ್ ಮಾಡುತ್ತಿರುವಾಗ ವಾಹನ ನೀರಿಗೆ ಬಿದ್ದಿದೆ. ಈ ವೇಳೆ ಬೆನ್ನಿಗೆ ಗಾಯವಾಗಿ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರಿಬ್ಬರು ಸ್ಥಳೀಯ ಹೋಟೆಲ್ಗೆ ಹೋಗಿದ್ದು, ಸದ್ಯ ವೈದ್ಯರು ಈ ಕಲಾವಿದರಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಭಾರೀ ಭದ್ರತೆಯಲ್ಲಿ ಶೂಟಿಂಗ್ ಮಾಡಲಾಗಿತ್ತು. ಆದರೂ ಅಪಘಾತ ಸಂಭವಿಸಿ, ದುರದೃಷ್ಟವಶಾತ್ ವಿಜಯ್ ಮತ್ತು ಸಮಂತಾ ಸಣ್ಣ ಮಟ್ಟದಲ್ಲಿ ಪೆಟ್ಟಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
`ಖುಷಿ’ ಇದೇ ಡಿಸೆಂಬರ್ 23ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಸದ್ಯ ವಿಜಯ್ ಮತ್ತು ಸಮಂತಾ ಸೇಫ್ ಆಗಿರೋದನ್ನ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.