ಮೈಸೂರು, ಮೇ 22 (DaijiworldNews/DB): ಶಿಕ್ಷಣ ತಜ್ಞರಲ್ಲದವರನ್ನು ಪಠ್ಯ ಪುಸ್ತಕ ತಯಾರಿ ಸಮಿತಿಯ ನೇತೃತ್ವ ವಹಿಸಲು ಅವಕಾಶ ನೀಡಿರುವುದು ದುರಂತ. ಧರ್ಮಾಧಾರಿತ ಶಿಕ್ಷಣ ರಾಜ್ಯದಲ್ಲಿ ಬೇಡ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಸಂಘ ಪರಿವಾರದ ಕಾರ್ಯಕರ್ತ. ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಎಂಬುದು ರಾಜಕೀಯ ಸಂಘರ್ಷವಲ್ಲ. ಶಿಕ್ಷಣವನ್ನು ನಾವೆಲ್ಲ ಸೇರಿ ಹಾಳು ಮಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳಿಗೆ ಯಜ್ಞ ಕುಂಡ ಎಲ್ಲಿ ಇರಬೇಕೆಂಬ ಪಾಠ ಬೇಕಾಗಿಲ್ಲ. ಧರ್ಮಾಧಾರಿತವಾಗಿ ಪಠ್ಯ ತಯಾರು ಮಾಡಿ ಅದನ್ನು ಕೇಸರೀಕರಣಗೊಳಿಸುವುದು ಶಿಕ್ಷಣ ಕ್ಷೇತ್ರಕ್ಕೆ ಅಪಾಯಕಾರಿಯಾಗಿದೆ. ಸಾಮಾಜಿಕ ಕ್ರಾಂತಿಯ ಹರಿಕಾರ ನಾರಾಯಣ ಗುರುಗಳ ಪಠ್ಯ ತೆಗೆದ ನಿರ್ಧಾರ ಸರಿಯಲ್ಲ ಎಂದು ಇದೇ ವೇಳೆ ಅವರು ತಿಳಿಸಿದರು.
ತಮಗೆ ತೋಚಿದ್ದನ್ನು ಪಠ್ಯದಲ್ಲಿ ಅಳವಡಿಸಿಕೊಂಡರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಟಿಪ್ಪು ತನ್ನ ಮಕ್ಕಳನ್ನು ಒತ್ತೆ ಇಟ್ಟು ರಾಜ್ಯವನ್ನು ರಕ್ಷಣೆ ಮಾಡಿದ್ದನೇ ಹೊರತು ಬ್ರಿಟಿಷರ ವಿರುದ್ದ ಮಂಡಿಯೂರಲಿಲ್ಲ ಎಂದರು.