ಬೆಂಗಳೂರು, ಮೇ 22 (DaijiworldNews/HR): ಸಿಲಿಕಾನ್ ಸಿಟಿಯನ್ನು ಸ್ವಿಮ್ಮಿಂಗ್ ಪೂಲ್ ಮಾಡಿದ ಹೆಗ್ಗಳಿಕೆ ಬಿಜೆಪಿ ಸರಕಾರಕ್ಕೇ ಸಲ್ಲಬೇಕು. ಅಭಿವೃದ್ಧಿಯಲ್ಲಿ ಕ್ಷೇತ್ರವಾರು ತಾರತಮ್ಮ ಮಾಡಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿ ಖಂಡನೀಯ. ಅನುದಾಲದ ಹೊಳೆ ಹರಿದ ಕ್ಷೇತ್ರಗಳೇ ಈಗ ನೀರಿನಲ್ಲಿ ತೇಲುತ್ತಿವೆ ಎಂದು ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಚಿಕ್ಕಬೆಟ್ಟಹಳ್ಳಿಗೆ ಒಂದು ತಿಂಗಳ ಒಳಗಾಗಿ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಶುರುವಾಗಬೇಕು. ತಪ್ಪಿದರೆ ಖುದ್ದು ನಾನೇ ಅಲ್ಲಿಗೆ ಹೋಗಿ ಧರಣಿ ಕೂರಬೇಕಾಗುತ್ತದೆ. ಜಾತಿ, ಧರ್ಮದ ಹೆಸರಿನಲ್ಲಿ ಅಭಿವೃದ್ಧಿ ತಾರತಮ್ಯ ಮಾಡುವುದು ಹೇಯ, ರಾಕ್ಷಸಿ ಮನಸ್ಥಿತಿ ಎನ್ನದೇ ವಿಧಿ ಇಲ್ಲ ಎಂದರು.
ಸರ್ವ ಜನಾಂಗದ ಜನರನ್ನು ಸಮಭಾವದಿಂದ ಕಂಡು ಸರ್ವ ಜನಾಂಗದ ತೋಟ ನಿರ್ಮಿಸಿದ್ದರು ನಾಡಪ್ರಭು ಕೆಂಪೇಗೌಡರು. ಪ್ರಭುಗಳು ಕಟ್ಟಿದ ಬೆಂಗಳೂರಿನ ಯಲಹಂಕದಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ, ಅವರು ವಾಸಿಸುವ ಬಡಾವಣೆಯನ್ನು ಕಡೆಗಣಿಸಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಮಳೆಯಿಂದ ತೀವ್ರ ಹಾನಿಗೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ನಾನು, ಶನಿವಾರದಂದು ಬ್ಯಾಟರಾಯನಪುರ, ಹೆಬ್ಬಾಳ, ಯಲಹಂಕ ವಿಧಾನಸಭೆ ಕ್ಷೇತ್ರಗಳನ್ನು ವೀಕ್ಷಣೆ ಮಾಡಿದ್ದೆ. ಆಗ ನನಗೆ ʼರಿಪಬ್ಲಿಕ್ ಆಫ್ ಯಲಹಂಕʼದ ಮಹಾದರ್ಶನವೇ ಆಯಿತು ಎಂದರು.
ಯಲಹಂಕದ ಕೋಗಿಲು ಕ್ರಾಸ್ ಬಳಿಯ ಕೇಂದ್ರೀಯ ಅಪಾರ್ಟ್ʼಮೆಂಟ್ʼಗೆ ಭೇಟಿ ನೀಡಿ ಮಳೆಹಾನಿ ವೀಕ್ಷಣೆ ಮಾಡುವ ವೇಳೆ ನೈಜ ಸಂತ್ರಸ್ತರೇ ಅಹವಾಲು ಹೇಳಿಕೊಳ್ಳಲು ಮುಂದೆ ಬಾರದೇ ಇರುವುದು ನನ್ನನ್ನು ಚಕಿತಗೊಳಿಸಿತು ಎಂದು ಹೇಳಿದ್ದಾರೆ.