ನವದೆಹಲಿ, ಮೇ 22 (DaijiworldNews/DB): ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆಯಾದ ಘಟನೆ ನೈಋತ್ಯ ದಿಲ್ಲಿಯ ವಸಂತ್ ವಿಹಾರ್ ಪ್ರದೇಶದ ಫ್ಲಾಟ್ವೊಂದರಲ್ಲಿ ಕಳೆದ ರಾತ್ರಿ ನಡೆದಿದೆ.
ಮೃತರನ್ನು ಮಂಜು ಮತ್ತು ಆಕೆಯ ಪುತ್ರಿಯರಾದ ಅಂಶಿಕಾ ಮತ್ತು ಆಂಕ್ ಎಂದು ಗುರುತಿಸಲಾಗಿದೆ.
ಫ್ಲಾಟ್ ಸಂಖ್ಯೆ 207ರಲ್ಲಿ ಇವರೆಲ್ಲಾ ವಾಸವಾಗಿದ್ದರು. ಘಟನೆ ದಿನ ಫ್ಲಾಟ್ ಒಳಗಿನಿಂದ ಲಾಕ್ ಆಗಿತ್ತು. ಒಳಗಿನಿಂದ ಗ್ಯಾಸ್ ಲೀಕ್ ಆಗುತ್ತಿರುವ ಬಗ್ಗೆ ಅಕ್ಕ ಪಕ್ಕದ ಮನೆಯವರಿಗೆ ಅನುಮಾನ ಬಂದು ಬಾಗಿಲು ತಟ್ಟಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ತತ್ಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರೆದು ಒಳ ಹೋದಾಗ ಸಿಲಿಂಡರ್ನಿಂದ ಭಾಗಶಃ ಅನಿಲ ಸೋರಿಕೆಯಗಿತ್ತು. ಕೊಠಡಿಯೊಳಗೆ ಪರಿಶೀಲಿಸಿದಾಗ ಹಾಸಿಗೆಯ ಮೇಲೆ ಮೂವರ ಶವ ಪತ್ತೆಯಾಗಿದೆ. ಗ್ಯಾಸ್ ಸೋರಿಕೆಯಿಂದಾಗಿ ಮೂವರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ತಿಳಿಸಿದ್ದಾರೆ.
ಆದರೆ ಇದೇ ವೇಳೆ ಡೆತ್ನೋಟ್ ಕೂಡಾ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗುತ್ತಿದೆ. ಮಂಜು ಅವರ ಪತಿ ಕೊರೊನಾದಿಂದಾಗಿ ಕಳೆದ ವರ್ಷ ಏಪ್ರಿಲ್ನಲ್ಲಿ ಮೃತಪಟ್ಟಿದ್ದರು. ಅವರ ಸಾವಿನಿಂದ ಕುಟುಂಬವು ತೀವ್ರ ಖಿನ್ನತೆಗೆ ಒಳಗಾಗಿತ್ತು. ಪತಿಯ ಅಗಲಿಕೆಯಿಂದ ಪತ್ನಿ ಮಂಜು ಅನಾರೋಗ್ಯಕ್ಕೊಳಗಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ.