ಬೆಂಗಳೂರು, ಮೇ 21(DaijiworldNews/DB): ಮುಂಗಾರುಪೂರ್ವ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಹಾನಿ ಸಂಬಂಧ ಸೂಕ್ತ ಪರಿಹಾರ ಹಾಗೂ ನೆರವು ವಿತರಣಾ ಕಾರ್ಯ ನಡೆಸುವ ಸಲುವಾಗಿ ಮುಂದಿನ 15 ದಿನಗಳ ಕಾಲ ರಾಜ್ಯದಲ್ಲಿ ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ್ಸೂನ್ ಪೂರ್ವ ಮಳೆಯಿಂದಾಗಿ ಮೇ15ರಿಂದ 21ರವರೆಗೆ ರಾಜ್ಯದ ವಿವಿಧೆಡೆ 12 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 430 ಜಾನುವಾರುಗಳು ಮಳೆಗೆ ಬಲಿಯಾಗಿವೆ. 1431 ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, 4242 ಮನೆಗಳಿಗೆ ಭಾಗಶ: ತೊಂದರೆಯಾಗಿದೆ. ಹೀಗಾಗಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಮುಂದಿನ 15 ದಿನಗಳ ಕಾಲ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ಅಕಾಲಿಕವಾಗಿ ಬೇಸಗೆಯಲ್ಲೇ ಸುರಿದ ಮಳೆಯಿಂದಾಗಿ ಕೃಷಿಕರೂ ತೊಂದರೆಗೆ ಸಿಲುಕಿದ್ದಾರೆ. ರಾಜ್ಯದಲ್ಲಿ 7010 ಹೆಕ್ಟೇರ್ ಕೃಷಿ ಬೆಳೆಗೆ ಹಾನಿ ಉಂಟಾಗಿದೆ. 5736 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ಈ ಎಲ್ಲಾ ಹಾನಿಗೆ ಪರಿಹಾರ ಒದಗಿಸಲು 728 ಕೋಟಿ ರೂ.ಗಳು ಡಿಸಿಗಳ ಪಿಡಿ ಖಾತೆಯಲ್ಲಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಮುಂದಿನ ಮೂರು ದಿನಗಳ ಕಾಲ ಜಿಲ್ಲಾಧಿಕಾರಿಗಳು, ಕಾರ್ಯದರ್ಶಿಗಳು ಕಡ್ಡಾಯ ಸ್ಥಳ ಪರಿಶೀಲನೆ ನಡೆಸಬೇಕು. ಅಲ್ಲದೆ ಸ್ಥಳ ಭೇಟಿ ಕುರಿತು ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.