ನವದೆಹಲಿ, ಮೇ 20 (DaijiworldNews/SM): ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ ಪ್ರಕರಣ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ್ದಾರೆ ಎಂದು ಸುಪ್ರಿಂಕೋರ್ಟ್ ನೇಮಿಸಿದ ಸಮಿತಿ ವರದಿ ನೀಡಿದೆ. ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ನಡೆಸಿದ್ದರು. ಆದರೆ, ಇದು ಉದ್ದೇಶಪೂರ್ವಕ ಎನ್ನುವ ಆರೋಪ ಮಾಡಲಾಗಿದೆ.
ನ್ಯಾಯಮೂರ್ತಿ ವಿಎಸ್ ಸಿರ್ಪುರ್ಕರ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿ ಪ್ರಕರಣದ ತನಿಖೆಯಲ್ಲಿ ಸ್ಪಷ್ಟ ಲೋಪವನ್ನು ಎತ್ತಿ ತೋರಿಸಿದೆ. ಅಲ್ಲದೆ, ಎನ್ ಕೌಂಟರ್ ನಡೆಸಿರುವ ಹತ್ತು ಮಂದಿ ಪೊಲೀಸರನ್ನು ಕೊಲೆ ಆರೋಪದಲ್ಲಿ ವಿಚಾರಣೆಗೆ ಒಳಪಡಿಸುವಂತೆ ಸಮಿತಿ ತಿಳಿಸಿದೆ. ಇನ್ನು ಹತ್ಯೆಯಾಗಿರುವವರ ಪೈಕಿ ಮೂವರು ಅಪ್ರಾಪ್ತರು ಎನ್ನುವ ಬಗ್ಗೆಯೂ ಕೂಡ ಸಮಿತಿ ಉಲ್ಲೇಖಿಸಿದೆ.
2019ರ ನವೆಂಬರ್ 27ರಂದು ಮಹಿಳಾ ಪಶುವೈದ್ಯರನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಆರೋಪಿಗಳು ಕೊಲೆ ಮಾಡಿದ್ದರು. ಬಳಿಕ ಮಹಿಳೆಯ ದೇಹವನ್ನು ಸುಟ್ಟುಹಾಕಿ ಕ್ರೌರ್ಯ ಎಸಗಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿ ಸ್ಥಳಾ ಪರಿಶೀಲನೆಗೆಂದು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಈ ಪ್ರಕರಣ ದೇಶದೆಲ್ಲೆಡೆ ಸದ್ದು ಮಾಡಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು.