ಬೆಂಗಳೂರು, ಮೇ 17 (DaijiworldNews/HR): ದೇಹದಲ್ಲಿ ಕೊಬ್ಬಿನ ಅಂಶ(ಫ್ಯಾಟ್) ಕರಗಿಸಲು ಅವರು ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಕಿರುತೆರೆ ನಟಿ ಚೇತನಾ ರಾಜ್(22) ನಿಧನರಾಗಿದ್ದು, ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಮಗಳ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಚೇತನಾ ತಂದೆ ವರದರಾಜು, ಫ್ಯಾಟ್ ಹೆಚ್ಚಿದೆ ಎಂದಿರುವುದಕ್ಕೆ ನವರಂಗ್ ವೃತ್ತದ ಬಳಿ ಇರುವ ಡಾ. ಶೆಟ್ಟಿ ಆಸ್ಪತ್ರೆಗೆ ಸೋಮವಾರ ಬೆಳಗ್ಗೆ ದಾಖಲಾಗಿದ್ದು, ಈ ಮಾಹಿತಿ ನಮಗೆ ಇರಲಿಲ್ಲ. ಸರಿಯಾದ ಮುಂಜಾಗೃತಾ ಕ್ರಮಗಳಿಲ್ಲದೆ, ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಇನ್ನು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ನಮ್ಮಿಂದ ಯಾವುದೇ ಸಹಿ ಪಡೆದಿಲ್ಲ. ಗೆಳೆಯರ ಜೊತೆಗೆ ಆಸ್ಪತ್ರೆಗೆ ಚೇತನಾ ಬಂದಿದ್ದಳು. ಸೋಮವಾರ ಬೆಳಗ್ಗೆ 8.30ಕ್ಕೆ ಆಸ್ಪತ್ರೆಗೆ ಬಂದಿದ್ದು, ಸಂಜೆ ಐದು ಗಂಟೆಯಾದರೂ ಡಿಸ್ಚಾರ್ಜ್ ಮಾಡಿಲ್ಲ. ನನಗೆ ರಾತ್ರಿ 9 ಗಂಟೆಗೆ ಮಾಹಿತಿ ಸಿಕ್ಕಿತು. ನಾವು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಕಲರ್ಸ್ ಕನ್ನಡದ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಮುಂತಾದ ಧಾರಾವಾಹಿ ಹಾಗೂ ಕೆಲ ಸಿನಿಮಾಗಳಲ್ಲಿ ಚೇತನಾ ರಾಜ್ ನಟಿಸಿದ್ದರು.