ತುಮಕೂರು, ಮೇ 15 (DaijiworldNews/DB): ಪ್ರಿಯಕರ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಮಾನಸಿಕವಾಗಿ ನೊಂದ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
ಅರೆಹಳ್ಳಿ ಗ್ರಾಮದ ಸುಷ್ಮಾ(22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಯ ಪ್ರಿಯಕರ ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ (23) ಮೇ 11ರಂದು ಅಪಘಾತದಿಂದ ಸಾವಿಗೀಡಾಗಿದ್ದರು.
ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಹೊಂದಿದ್ದ ಧನುಷ್, ಮೇ 11ರಂದು ಊರಿನ ಜಾತ್ರೆಗೆ ಆಗಮಿಸುತ್ತಿದ್ದ ವೇಳೆ ನೆಲಮಂಗಳ ಕುಲಾನಹಳ್ಳಿ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದರು. ಸುಷ್ಮಾಆತನ ಅಂತ್ಯ ಸಂಸ್ಕಾರಕ್ಕೂ ಹೋಗಿದ್ದು, ಆತನ ಸಾವಿನಿಂದ ಖಿನ್ನತೆಗೆ ಜಾರಿದ್ದರು. ಪ್ರಿಯಕರನ ಸಾವಿನ ದುಃಖದಿಂದ ಹೊರ ಬರಲಾರದೆ ಶನಿವಾರ ರಾತ್ರಿ ಸುಷ್ಮಾ ವಿಷ ಸೇವಿಸಿದ್ದಾರೆ. ತತ್ಕ್ಷಣ ಮನೆಯವರು ಆಸ್ಪತ್ರೆಗೆ ಕೊಂಡೊಯ್ದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಸುಷ್ಮಾ ಮತ್ತು ಧನುಷ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿಗೆ ಮನೆಯವರ ವಿರೋಧ ಇದ್ದರೂ, ತಾವೇ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಮದುವೆಯಾಗಬೇಕಿದ್ದ ಜೋಡಿಯನ್ನು ವಿಧಿ ಕಿತ್ತುಕೊಂಡಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821