ಪಾಂಡವಪುರ, ಮೇ 12 (DaijiworldNews/HR): ಸಪ್ತಪದಿ ತುಳಿದ ಮರುಕ್ಷಣವೇ ಮದುಮಗಳು ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ಎಸ್ಟಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಎಲ್.ವೈ.ಐಶ್ವರ್ಯ(ತೇಜಸ್ವಿನಿ) ತಾಳಿ ಕಟ್ಟಿಸಿಕೊಂಡು ನೇರವಾಗಿ ಪರೀಕ್ಷೆ ಹಾಜ್ ಗೆ ಹಾಜರಾಗಿದ್ದಾಳೆ.
ಐಶ್ವರ್ಯಾ ಮದುವೆ ದಿನವೇ ಬಿಕಾಂ ಪ್ರಥಮ ವರ್ಷದ ಡಿಜಿಟಲ್ ಫ್ಲೂಯೆನ್ಸಿ ವಿಷಯ ಪರೀಕ್ಷೆ ನಡೆದಿದ್ದು, ಧಾರೆ ಮುಗಿದ ತಕ್ಷಣ ನವವಧು ಪರೀಕ್ಷೆಗೆ ಹಾಜರಾಗಿದ್ದಾಳೆ.
ಇನ್ನು ಬೆಳಗ್ಗೆ 9.30 ರಿಂದ 10.30ರವರೆಗೆ ಮುಹೂರ್ತವಿದ್ದು ನಂತರ ಆರತಕ್ಷತೆ ಮುಗಿಸಿ ಅತ್ತೆಯ ಮನೆಗೆ ಪ್ರವೇಶಿಸ ಬೇಕಿದ್ದ ಮದುಮಗಳು ಕಲ್ಯಾಣ ಮಂಟಪದಿಂದ ಮದುಮಗನೊಂದಿಗೆ ನೇರವಾಗಿ ಪರೀಕ್ಷೆಯ ಕೊಠಡಿಗೆ ಪ್ರವೇಶಿಸಿ ಸುದ್ದಿಯಾಗಿದ್ದಾಳೆ.
ಮದುವೆ ದಿನವೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಈಕೆಗೆ ಮನಯವರಿಗೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಎಸ್ಟಿಜಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಅಭಿನಂದನೆ ಸಲ್ಲಿಸಿದ್ದಾರೆ.