ಬೆಂಗಳೂರು, ಮೇ 11 (DaijiworldNews/DB): ಅಸಾನಿ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಶೀತದಿಂದ ಕೂಡಿದ ಗಾಳಿ, ಮಳೆಯಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುವಾಗಿ ಪರಿವರ್ತನೆಯಾಗಲಿದ್ದು, ಇದರ ಪರಿಣಾಮ ಬಿರು ಬೇಸಿಗೆಯಲ್ಲಿ ಮಳೆ ಸುರಿಯಲು ಕಾರಣವಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಅಸಾನಿ ಚಂಡಮಾರುತದಿಂದಾಗಿ ನಿರಂತರ ಮಳೆ ಸುರಿಯುತ್ತಿದೆ. ನೆರೆಯ ಆಂಧ್ರ, ತಮಿಳುನಾಡು, ಒಡಿಶಾ ರಾಜ್ಯಗಳಲ್ಲಿ ಭಾನುವಾರದಿಂದಲೇ ತೀವ್ರ ಮಳೆ ಸುರಿಯುತ್ತಿದೆ.
ಕರ್ನಾಟಕದ ಕರಾವಳಿ, ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅಸಾನಿ ಚಂಡಮಾರುತದ ಪ್ರಭಾವ ಬೀರಿದ್ದು, ನಿರಂತರ ಮಳೆಯಾಗುತ್ತಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಚಿತ್ರದುರ್ಗ, ತುಮಕೂರು, ಬಳ್ಳಾರಿ, ದಾವಣಗೆರೆ, ಚಾಮರಾಜನಗರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮುಂತಾದೆಡೆ ಬಿರುಸಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತದ ವೇಗ ಅಧಿಕವಿರುವ ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರಿನಲ್ಲಿ ಇನ್ನೂ ಕೆಲವು ದಿನಗಳವರೆಗೆ ಚಂಡಮಾರುತ ಪ್ರಭಾವ ಮುಂದುವರಿಯುವ ಸಾಧ್ಯತೆ ಇದೆ. ನಾಳೆಯ ಬಳಿಕ ಆಂದ್ರದ ಉತ್ತರ ಭಾಗ ಮತ್ತು ಒಡಿಶಾ ಮೂಲಕ ಚಂಡಮಾರುತ ಹಾದು ಹೋಗಿ ಬಳಿಕ ದುರ್ಬಲವಾಗಲಿದೆ ಎಂದು ಇಲಾಖೆ ಮಾಹಿತಿ ತಿಳಿಸಿರುವುದಾಗಿ ವರದಿಯಾಗಿದೆ. ದಕ್ಷಿಣ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗಿದ್ದು, ಜನ ಕೊಡೆ, ರೈನ್ ಕೋಟ್ ಹಿಡಿದೇ ನಡೆದಾಡುವುದು, ಸಂಚರಿಸುವುದು ಮಾಡುತ್ತಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯಲ್ಲಿ ಮಂಗಳವಾರ ಸಂಜೆ ಚಿನ್ನದ ಬಣ್ಣದ ರಥದ ಮಾದರಿಯೊಂದು ಪತ್ತೆಯಾಗಿದ್ದು, ಅಸಾನಿ ಪ್ರಭಾವ ಮತ್ತು ಒತ್ತಡದಿಂದಾಗಿ ಮ್ಯಾನ್ಮಾರ್, ಮಲೇಷ್ಯಾ ಅಥವಾ ಥೈಲ್ಯಾಂಡ್ನಿಂದ ತೇಲಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ.