ಬೆಂಗಳೂರು, ಮೇ 09 (DaijiworldNews/HR): ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರಾಗಿದ್ದು, ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದು, ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಅನಗತ್ಯವಾಗಿ ಸಂಘರ್ಷಗಳನ್ನು ಈಗ ರಾಜ್ಯದಲ್ಲಿ ಸೃಷ್ಟಿ ಮಾಡಲಾಗುತ್ತಿದ್ದು, ಶಾಂತಿ ಕದಡುವ ಯತ್ನ ನಡೆಯುತ್ತಿದೆ. ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ನಡೆಸುತ್ತಿರುವವರೆಲ್ಲ ಉಗ್ರರು. ಇಂತವರನ್ನು ಯುಎಪಿಎ(ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಆಕ್ಟ್ ಅಡಿಯಲ್ಲಿ ಬಂಧಿಸಬೇಕು ಎಂದರು.
ಇನ್ನು ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಇಂದು ಇಂತಹ ಸಂಘಟನೆಗಳ ಅಭಿಯಾನಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಇಂತಿಷ್ಠೆ ಡೆಸಿಬಲ್ ಸೌಂಡ್ ಇರಬೇಕು ಎಂದು ಸೂಚಿಸಿದೆ. ಅದನ್ನು ಪಾಲಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.