ಬೆಂಗಳೂರು, ಮೇ 08 (DaijiworldNews/DB): ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಗಾಂಧಿ ಅವರ ರಾಜಿನಾಮೆ ಕೇಳುವ ತಾಕತ್ತು ಸಿದ್ದರಾಮಯ್ಯನವರಿಗೆ ಇದೆಯೇ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ಸೋನಿಯಾಗಾಂಧಿ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಡೆ ಇರುವ ಕಾಂಗ್ರೆಸ್ ನಾಯಕರ ಮಾನ ಮರ್ಯಾದೆಯನ್ನು ಯಾವಾಗ ಪ್ರಶ್ನಿಸುತ್ತೀರಿ ಎಂದು ಕೇಳಿದೆ. ರೈಲ್ವೇ ಅಪಘಾತ ಆಗಿದ್ದಕ್ಕೆ ಶಾಸ್ತ್ರಿ ರಾಜೀನಾಮೆ ನೀಡಿದ್ದರು. ಆದರೆ ಈಗಿನವರಿಗೆ ಮಾನ ಮರ್ಯಾದೆ ಇಲ್ಲ ಎಂದು ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ದ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯನವರಿಗೆ ಮರು ಪ್ರಶ್ನೆ ಹಾಕಿದೆ.
ಸಿದ್ದರಾಮಯ್ಯ ಅವರೇ, ನಿಮ್ಮ ಬಾಯಿಯಿಂದ ಇಂತಹ ಮಾತುಗಳು ಹೊರಬಂದರೆ ರಾಜ್ಯದ ಜನತೆ ನವರಂಧ್ರಗಳಿಂದ ನಗುತ್ತಾರೆ. ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ. ಹೈಕಮಾಂಡ್ಗೆ ನೀಡಿದ ಕಪ್ಪವನ್ನು ಡೈರಿಯಲ್ಲಿ ಬರೆದಿಟ್ಟ ನೀವು ಈಗ ಸತ್ಯ ಹರಿಶ್ಚಂದ್ರನಂತೆ ವರ್ತಿಸಿದರೆ ನಂಬಲು ಸಾಧ್ಯವೇ? ಎಂದೂ ಬಿಜೆಪಿ ಪ್ರಶ್ನಿಸಿದೆ.
ಮಾನ್ಯ ಸಿದ್ಧರಾಮಯ್ಯ ಅವರೇ, ಲಕ್ಷಾಂತರ ಮೌಲ್ಯದ ವಾಚ್ ಹಗರಣ ಆದಾಗ ನಿಮ್ಮ ಮಾನ ಮಾರ್ಯಾದೆ ಎಲ್ಲಿತ್ತು?, ಅರ್ಕಾವತಿ ರೀಡೂ ಪ್ರಕರಣದಲ್ಲಿ ನಿಮ್ಮ ಮಾನ ಮರ್ಯಾದಿ ಎತ್ತರಕ್ಕೇರಿತ್ತೇ?, ಜೈಲಿನಿಂದ ಬಂದವರನ್ನು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಮಾಡುವಾಗ ನಿಮ್ಮ ಮಾನ ಮರ್ಯಾದೆ ಎಲ್ಲಿತ್ತು? ಎಂದು ಟ್ವೀಟ್ ಮಾಡಿ ಪ್ರಶ್ನಿಸಲಾಗಿದೆ.