ಬೆಳಗಾವಿ, ಮೇ 06 (DaijiworldNews/DB): ದೆಹಲಿಯಿಂದ ಬಂದಿದ್ದ ಕೆಲವರು ನನಗೆ ಮುಖ್ಯಮಂತ್ರಿ ಹುದ್ದೆಯ ಆಮಿಷವೊಡ್ಡಿ 2,500 ಕೋಟಿ ರೂ. ಸಿದ್ದವಿಟ್ಟುಕೊಳ್ಳಿ ಎಂದಿದ್ದರು ಎಂಬುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ರಾಮದುರ್ಗದಲ್ಲಿ ಗುರುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಹೀಗೂ ನಡೆಯುತ್ತದೆ. 2,500 ಕೋಟಿ ರೂ. ಎಂದರೆ ಏನು? ಅಷ್ಟೊಂದು ಹಣವನ್ನು ಕೋಣೆಯಲ್ಲಾ ಅಥವಾ ಗೋದಾಮಿನಲ್ಲಿ ಇಡುವುದಾ ಎಂದು ಪ್ರಶ್ನಿಸಿದ್ದೆ ಎಂದವರು ಹೇಳಿಕೆ ನೀಡಿದ್ದರು. ಇದೀಗ ಈ ವಿಚಾರವಾಗಿ ಭಾರೀ ಚರ್ಚೆ ನಡೆಯುತ್ತಿದ್ದು, ಯತ್ನಾಳ್ಗೆ ಕೋಟ್ಯಾಂತರ ರೂ. ಆಮಿಷ ಒಡ್ಡಿದವರು ಯಾರು ಎಂಬ ಬಗ್ಗೆ ಮಾತುಕತೆ ನಡೆಯುತ್ತಿದೆ.
ಟಿಕೆಟ್ ಕೊಡಿಸುತ್ತೇವೆಂದು ಮೋಸ ಮಾಡಲು ಹಲವು ಮಂದಿ ಇರುತ್ತಾರೆ. ಅಮಿತ್ ಶಾ, ಸೋನಿಯಾಗಾಂಧಿ, ಜೆ.ಪಿ. ನಡ್ಡಾ ಬಳಿ ಕರೆದೊಯ್ಯುತ್ತೇವೆ ಎಂದೆಲ್ಲಾ ಹೇಳುತ್ತಾರೆ. ಆದರೆ ನಂಬಿದರೆ ಹಾಳಾಗುವುದು ಖಂಡಿತಾ. ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಆಮಿಷ, ಮೋಸಗಳೆಲ್ಲ ಮಾಮೂಲಾಗುತ್ತವೆ. ಎಚ್ಚರದಿಂದಿರಬೇಕಾಗುತ್ತದೆ ಎಂದವರು ತಿಳಿಸಿದರು.
ನಾನು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ, ರಾಜನಾಥ್ಸಿಂಗ್, ಅರುಣ್ ಜೇಟ್ಲಿ ನನ್ನ ಹೆಸರು ಹಿಡಿದೇ ಕರೆಯುತ್ತಿದ್ದರು. ಇಷ್ಟೆಲ್ಲ ಪರಿಚಯವಿರುವ ನನಗೇ ಆಮಿಷ ಒಡ್ಡುತ್ತಾರೆಂದರೆ ಏನು ಎಂದವರು ಇದೇ ವೇಳೆ ಪ್ರಶ್ನಿಸಿದರು.
ಸಾಮೂಹಿಕ ವಿವಾಹ ಮಾಡಿಸುವುದು, ನೋಟ್ಬುಕ್ ವಿತರಣೆ, ತಾಳಿಭಾಗ್ಯ ಇನ್ನೇನೇನೋ ಕಾರ್ಯಕ್ರಮಗಳ ಹೆಸರಿನಲ್ಲಿ ನಾಟಕ ಮಾಡುವುದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಮಾನ್ಯ. ಇನ್ನೊಂದು ವರ್ಷದಲ್ಲಿ ಯಾರು ಯಾರು ಏನೇನು ಭಾಗ್ಯಗಳನ್ನು ಕೊಡುತ್ತಾರೋ ಅದನ್ನೆಲ್ಲ ತೆಗೆದುಕೊಳ್ಳಿ. ಆದರೆ ಚಲೋ ಭಾಗ್ಯ ಇರುವವರಿಗೆ ಮಾತ್ರ ಮತ ನೀಡಿ ಎಂದು ಇದೇ ವೇಳೆ ಅವರು ವ್ಯಂಗ್ಯವಾಡಿದರು.