ತಮಿಳುನಾಡು, ಮೇ 04 (DaijiworldNews/HR): ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿಳಾಸ ಕೇಳುವ ನೆಪದಲ್ಲಿ ಮೇಕೆ ಮೇಯಿಸುತ್ತಿದ್ದ ವೃದ್ಧೆಯ ಚಿನ್ನದ ಸರ ಕಳ್ಳತನ ಮಾಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಶಾಂತ್(20) ಮತ್ತು ತೇಜಸ್ವಿನಿ(20) ಎಂದು ಗುರುತಿಸಲಾಗಿದೆ.
ಹೊಲದಲ್ಲಿ ವೃದ್ಧೆಯೊಬ್ಬರು ಮೇಕೆಗಳನ್ನು ಮೇಯಿಸುತ್ತಿದ್ದು, ಆಗ ಓರ್ವ ಯುವತಿ ಮತ್ತು ಯುವಕ ಸ್ಕೂಟರ್ನಲ್ಲಿ ಅಲ್ಲಿಗೆ ಬಂದು ವಿಳಾಸ ಕೇಳುವ ನೆಪದಲ್ಲಿ ಈಕೆಯನ್ನು ಮಾತನಾಡಿಸಿದ್ದಾರೆ. ಯುವತಿ ಸ್ಕೂಟರ್ ನಡೆಸುತ್ತಿದ್ದರೆ, ಹಿಂಬದಿ ಕುಳಿತಿದ್ದ ಯುವಕ ಏಕಾಏಕಿ ಕಾಳಿಯಮ್ಮಳ್ ಬಳಿ ಇದ್ದ 5.5 ಪವನ್ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ಇನ್ನು ಈ ಬಗ್ಗೆ ದಾಖಲಾದ ದೂರಿನನ್ವಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಅಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದು, ಸಿಸಿಟಿವಿಯಲ್ಲಿ ಸ್ಕೂಟರ್ನ ನಂಬರ್ ದಾಖಲಾಗಿತ್ತು. ಬಳಿಕ ಪೊಲೀಸರು ಪ್ರಶಾಂತ್ ಹಾಗೂ ತೇಜಸ್ವಿನಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.