ಒಡಿಶಾ, ಮೇ 02 (DaijiworldNews/MS): ಕುಡಿದ ಅಮಲಿನಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಕೊಂದು ಬಾವಿಗೆ ಎಸೆದಿರುವ ಘಟನೆ ಒಡಿಶಾ ಸುಂದರ್ಗಢ್ ಜಿಲ್ಲೆಯ ಕುಲಾ ಗ್ರಾಮದಲ್ಲಿ ನಡೆದಿದೆ.
ಕೂಲಿ ಕಾರ್ಮಿಕನಾಗಿದ್ದ ಆರೋಪಿ ಪಾಂಡು ಮುಂಡ ಶನಿವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದು, ಈ ವೇಳೆ ತನ್ನ ಪತ್ನಿ ದುಬುಲಿಯೊಂದಿಗೆ ಜಗಳವಾಡಿ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ದುಬುಲಿ ತನ್ನ ಜೀವವನ್ನು ಉಳಿಸಿಕೊಳ್ಳಲು ಮನೆಯಿಂದ ಓಡಿಹೋಗಿದ್ದಾಳೆ.
ಆದರೆ ಮುಂಡಾ ತನ್ನ ಕೋಪವನ್ನು ತನ್ನ ಮೂವರು ಮಕ್ಕಳಾದ 5 ವರ್ಷದ ಮಗಳು ಸೀಮಾ, 2 ವರ್ಷದ ಮಗ ರಾಜು ಮತ್ತು ಎರಡು ತಿಂಗಳ ಮಗುವಿನ ಮೇಲೆ ತೋರಿಸಿದ್ದಾನೆ. ಅಡ್ಡ ಬಂದ ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಅವರನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾನೆ.
ಭಾನುವಾರ ಬೆಳಗ್ಗೆ ದುಬುಲಿ ಹೊರ ಬಂದು ಮಕ್ಕಳನ್ನು ಹುಡುಕಿದ್ದಾಳೆ. ಈ ವೇಳೆ ಎಷ್ಟು ಹುಡುಕಿದರೂ ಮಕ್ಕಳು ಕಾಣಲಿಲ್ಲ. ಬಾವಿಯ ಬಳಿ ಬಿದ್ದಿದ್ದ ತನ್ನ ಮನೆಯ ಹೊದಿಕೆ ಕಂಡ ದುಬುಲಿ ಅಲ್ಲಿ ಹೋಗಿ ನೋಡಿದಾಗ, ಮಕ್ಕಳು ಬಾವಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾಳೆ.
“ನನ್ನ ಪತಿ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಅವನು ನನ್ನ ಮೇಲೆ ದಾಳಿ ಮಾಡಲು ಕೊಡಲಿಯನ್ನು ಎಳೆದ ನಂತರ, ನನ್ನ ಜೀವವನ್ನು ಉಳಿಸಿಕೊಳ್ಳಲು ನಾನು ಮನೆಯಿಂದ ಓಡಿಹೋದೆ. ಅವನು ನನ್ನ ಮಕ್ಕಳನ್ನು ಹೇಗೆ ಕೊಂದಿದ್ದಾನೆಂದು ನನಗೆ ತಿಳಿದಿಲ್ಲ", ಎಂದು ದುಬುಲಿ ಘಟನೆಯ ಕುರಿತು ವಿವರಿಸಿದ್ದಾಳೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳ ನೆರವಿನಿಂದ ಮೂವರು ಮಕ್ಕಳ ಮೃತದೇಹಗಳನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.