ಬೆಂಗಳೂರು, ಏ 30 (DaijiworldNews/DB): ಸಿದ್ದರಾಮಯ್ಯನವರು ಇಂಗ್ಲಿಷ್ ಮತ್ತು ಸೋನಿಯಾ ಗಾಂಧಿಯವರ ಗುಲಾಮ ಎಂಬುದಾಗಿ ಘೋಷಣೆ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಬಿಜೆಪಿ ನಾಯಕರೇ ನೀವು ಅಮಿತ್ ಶಾ ಗುಲಾಮರಾಗಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತುಮಕೂರಿನಲ್ಲಿ ಶನಿವಾರ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಅವರು ಮೊದಲು ತಾವು ಗುಲಾಮರು ಎಂಬುದನ್ನು ಒಪ್ಪಿಕೊಂಡು, ಇಂಗ್ಲಿಷ್ ಮತ್ತು ಸೋನಿಯಾ ಗಾಂಧಿಯವರಿಗೆ ಗುಲಾಮನಾಗಿದ್ದೇನೆ ಎಂದು ಘೋಷಿಸಲಿ ಎಂದರು.
ದೇಶೀಯ ಭಾಷೆಯನ್ನು ಅವರು ಒಪ್ಪಿಕೊಳ್ಳುತ್ತಾರೋ ಅಥವಾ ಆಕ್ರಮಣ ಮಾಡಿ ಹೇರಿದ ಗುಲಾಮಗಿರಿಯ ಭಾಷೆಯನ್ನು ಒಪ್ಪಿಕೊಳ್ಳುತ್ತಾರೋ ಎಂದು ಪ್ರಶ್ನಿಸಿದ ಅವರು, ನಮ್ಮ ಕನ್ನಡ ಶ್ರೇಷ್ಠವಾದುದು. ನಾವೆಂದೂ ಗುಲಾಮರಲ್ಲ. ಮಾತೃಭಾಷೆಗೆ ಪ್ರಾಧಾನ್ಯ ನೀಡಿ ಎಂಬುದನ್ನು ಅಮಿತ್ ಶಾ ಹೇಳಿದ್ದಾರೆ. ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬದಲಿಗೆ ಹಿಂದಿ ಬಳಸಿ ಎಂಬುದು ಅವರ ಹೇಳಿಕೆಯ ತಾತ್ಪರ್ಯವಾಗಿದೆ. ಕನ್ನಡ ಭಾಷೆ ಮಾತನಾಡಬೇಡಿ ಎಂದು ಶಾ ಹೇಳಿದ್ದರೆ ಖಂಡಿತಾ ನಾವು ಒಗ್ಗೂಡಿ ಧ್ವನಿ ಎತ್ತುತ್ತಿದ್ದೆವು ಎಂದವರು ಇದೇ ವೇಳ ತಿಳಿಸಿದರು.