ಕಲಬುರಗಿ, ಏ 30 (DaijiworldNews/HR): ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲಗಳ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರಗಳಿಗೆ ಮಾಡಿದ ದ್ರೋಹ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ತೈಲ ದರ ಇಳಿಸುವ ಆಗ್ರಹ ಕೇಳಿಬಂದಾಗ ಕೇಂದ್ರ ಸರ್ಕಾರ ರಾಜ್ಯಗಳತ್ತ ಬೊಟ್ಟು ಮಾಡುತ್ತಿದ್ದು, ಸುಂಕ ಏರಿಸಿದ್ದು ರಾಜ್ಯ ಸರ್ಕಾರಗಳೋ ಕೇಂದ್ರ ಸರ್ಕಾರವೋ್ ಎಂದು ಪ್ರಶ್ನಿಸಿದ್ದಾರೆ.
ಇನ್ನು ಒಂದೆಡೆ ಸೆಸ್ ಹೆಚ್ಚಳ ಮಾಡಿ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದ್ದು, ಇನ್ನೊಂದೆಡೆ 'ಜಿಎಸ್ಟಿ' ಸಂಗ್ರಹದಲ್ಲಿ ರಾಜ್ಯಗಳ ಪಾಲು ನೀಡುತ್ತಿಲ್ಲ. ಈ ಎರಡೂ ದಾರಿಗಳಲ್ಲಿ ರಾಜ್ಯ ಸರ್ಕಾರಗಳನ್ನು ಅಸಹಾಯಕ ಸ್ಥಿತಿಗೆ ತಂದುನಿಲ್ಲಿಸಿದ ಕೀರ್ತಿ ಪ್ರಧಾನಿ ಅವರಿಗೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಿ.ಎಂ ಕೇರ್ಸ್ ಯೋಜನೆ ಅಡಿ ಎಷ್ಟು ಸಂದಾಯವಾಗಿದೆ ಎಂಬ ವಿವರವನ್ನು ಇದೂವರೆಗೂ ನೀಡಿಲ್ಲ. ಈ ಬಗ್ಗೆ ಸಂಸತ್ತಿನಲ್ಲೂ ಪ್ರಶ್ನಿಸಿದ್ದೇನೆ, ಕೆಲವರು ಆರ್ಟಿಐ ಮೂಲಕವೂ ಮಾಹಿತಿ ಕೋರಿದ್ದಾರೆ. ಆದರೆ, ಕೇಂದ್ರ ಸರ್ಕಾರ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.