ನವದೆಹಲಿ, ಏ 27 (DaijiworldNews/DB): ಭಾರತ ಬೇರೆ ದೇಶಗಳ ಅಣತಿಯಂತೆ ಕಾರ್ಯ ನಿರ್ವಹಿಸುವುದಿಲ್ಲ. ನಮಗೆ ಪೂರಕವಾಗಿರುವ ನಿರ್ಧಾರಕ್ಕೆ ನಾವೆಂದೂ ಬದ್ದ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ರಾಯಸೀನಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುಡಿದ ಅವರು, ಭಾರತ ಇತರ ದೇಶಗಳ ಮುಲಾಜಿಗೆ ಬಗ್ಗುವ ಕಾಲ ಯಾವತ್ತೋ ಮುಗಿದಿದೆ ಎಂದರು.
ರಷ್ಯಾ-ಉಕ್ರೇನ್ ಯುದ್ದ ಸಂಬಂಧಿಸಿ ಭಾರತ ತಟಸ್ಥ ನಿಲುವು ಅನುಸರಿಸುತ್ತಿದೆ ಎಂದು ಬೇರೆ ದೇಶಗಳು ಹೇಳುತ್ತಿವೆ. ಆದರೆ ಅಪ್ಘಾನ್ನಲ್ಲಿ ನಾಗರಿಕ ಸಮಾಜವನ್ನು ನಡುನೀರಲ್ಲಿ ಕೈ ಬಿಟ್ಟಾಗ ಈ ರಾಷ್ಟ್ರಗಳೆಲ್ಲ ಮಾತನಾಡದೆ ಸುಮ್ಮನಿದ್ದುದೇಕೆ ಎಂದು ಅವರು ಪ್ರಶ್ನಿಸಿದರು.
ಯುರೋಪ್ನಲ್ಲಿ ಜರಗುತ್ತಿರುವ ವಿದ್ಯಾಮಾನಗಳು ಮುಂದೆ ಏಷ್ಯಾದಲ್ಲೂ ಘಟಿಸಬಹುದು ಎಂದು ಯುರೋಪ್ ಹೇಳುತ್ತಿದೆ. ಆದರೆ ದಶಕದಿಂದೀಚೆಗೆ ಏಷ್ಯಾದಲ್ಲಿ ಅಂತಹ ಘಟನೆ ನಡೆಯುತ್ತಲೇ ಇದೆ. ಮುಖ್ಯವಾಗಿ ಗಡಿ ವಿವಾದಗಳು, ಭಯೋತ್ಪಾದನಾ ಸಮಸ್ಯ ಮುಂತಾದವುಗಳು ಏಷ್ಯಾದಲ್ಲಿ ನಿರಂತರವಾಗಿವೆ. ಇವು ಎದುರಾಗುವ ಸಮಸ್ಯೆಗಳಲ್ಲ, ಎದುರಾಗಿರುವ ಸಮಸ್ಯೆಗಳಾಗಿವೆ. ಇದನ್ನು ಯುರೋಪ್ ಅರಿತುಕೊಳ್ಳಬೇಕು ಎಂದರು.
ಯುದ್ದ ನಿಲ್ಲಿಸಿ ಮಾತುಕತೆ ಮೂಲಕ ಒಮ್ಮತದ ನಿರ್ಧಾರ ತಳೆಯುವುದೇ ಉಕ್ರೇನ್ ಮತ್ತು ರಷ್ಯಾದ ಮುಂದಿರುವ ಸೂಕ್ತ ಆಯ್ಕೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.