ಬೆಂಗಳೂರು, ಏ 21 (DaijiworldNews/DB): 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಏ. 24ರ ಭಾನುವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ನಡೆಯಲಿದೆ. ದುಬೈನ ಆಕ್ಮೇ ಮೂವೀಸ್ ಇಂಟರ್ ನ್ಯಾಶನಲ್ ಸಂಸ್ಥೆಯಡಿ ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಶೇರಿಗಾರ್ ನಿರ್ಮಾಣದ ‘ಮಾರ್ಚ್22’ ಸಿನಿಮಾ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಸ್ವೀಕರಿಸಲಿದೆ.
ಮಾರ್ಚ್ 22 ಕೂಡ್ಲು ರಾಮಕೃಷ್ಣ ನಿರ್ದೇಶನದ 2017ನೇ ಸಾಲಿನ ಚಲನಚಿತ್ರವಾಗಿದ್ದು, ಮಂಗಳೂರು ಮೂಲದ ಎನ್ಆರ್ಐ ಉದ್ಯಮಿ, ದುಬೈನ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಎಲ್ಎಲ್ಸಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಗಾಯಕ ಹರೀಶ್ ಶೇರಿಗಾರ್ ನಿರ್ಮಿಸಿದ್ದಾರೆ. ಆಕ್ಮೆ ಮೂವೀಸ್ ಇಂಟರ್ನ್ಯಾಶನಲ್ನ ಬ್ಯಾನರ್ನಡಿ ಚಿತ್ರ ಮೂಡಿ ಬಂದಿದೆ.
ಆರ್ಯ ವರ್ದನ್, ಕಿರಣ್ ರಾಜ್, ಮೇಘಶ್ರೀ, ದೀಪ್ತಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್, ಆಶಿಶ್ ವಿದ್ಯಾರ್ಥಿ, ಶರತ್ ಲೋಹಿತಾಶ್ವ , ರವಿ ಕೇಲ್, ಜೈ ಜಗದೀಶ್, ವಿನಯ ಪ್ರಸಾದ್, ಪದ್ಮಜ ರಾವ್, ಸಾಧು ಕೋಕಿಲಾ, ಯುವಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ಪ್ರಶೋಬಿತಾ ಪ್ರಭಾಕರ್, ಚಿದಾನಂದ ಪೂಜಾರಿ, ಸುವರ್ಣ ಸತೀಶ್ ಪೂಜಾರಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಎನ್. ಜೆ. ರವಿಶೇಖರ್ ಮಾಯಾವಿ ಮತ್ತು ಮಣಿಕಾಂತ್ ಕದ್ರಿ ಸಂಗೀತ, ಮಧು ಬಿ.ಎ. ಸಂಭಾಷಣೆ, ಮೋಹನ್ ಎಂ.ಎಂ. ಛಾಯಾಗ್ರಹಣ, ಬಸವರಾಜ ಉರಸ್ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಈ ಚಲನಚಿತ್ರವು ಕೋಮು ಸೌಹಾರ್ದತೆಯಲ್ಲಿ ಬದುಕುವುದು, ಏಕತೆ ಕುರಿತ ಸಂದೇಶವನ್ನು ಹೊಂದಿದೆ.
“ಮಾರ್ಚ್ 22” ಕೋಡ್ಲು ರಾಮಕೃಷ್ಣ ಅವರ ಕನಸಿನ ಚಲನಚಿತ್ರವಾಗಿದ್ದು, ಕಥೆಯ ಬಗ್ಗೆ ಹರೀಶ್ ಶೇರಿಗಾರ್ ಅವರಲ್ಲಿ ಹೇಳಿದಾಗ ನಿರ್ಮಾಣಕ್ಕೆ ಹರೀಶ್ ಶೇರಿಗಾರು ಒಪ್ಪಿಗೆ ಸೂಚಿಸಿದ್ದರು. ಕೊಡ್ಲು ರಾಮಕೃಷ್ಣ ಅವರ ಮೇಲಿನ ನಂಬಿಕೆ, ಉತ್ತಮ ಕಥೆ ಮತ್ತು ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುವ ಅವಕಾಶ ಮುಂತಾದ ವಿಚಾರಗಳು ’ಮಾರ್ಚ್ 2’ ಚಿತ್ರ ನಿರ್ಮಾಣಕ್ಕೆ ಪ್ರೇರಣೆ ನೀಡಿತು ಎಂದು ಹರೀಶ್ ಶೇರಿಗಾರ್ ಹೇಳುತ್ತಾರೆ. ಬೆಳಗಾವಿಯ ಹೊರವಲಯದಲ್ಲಿರುವ 800 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ವಸತಿ ಕಟ್ಟಡದಲ್ಲಿ ನವೆಂಬರ್ 7ರಂದು ಚಿತ್ರೀಕರಣ ಆರಂಭಿಸಲಾಗಿತ್ತು.
ಪ್ರಶಸ್ತಿಗೆ ಭಾಜನವಾದ ಚಿತ್ರಗಳು
ಮೊದಲನೇಯ ಅತ್ಯುತ್ತಮ ಚಿತ್ರ-ಶುದ್ಧಿ, ಎರಡನೆಯ ಅತ್ಯುತ್ತಮ ಚಿತ್ರ – ಮಾರ್ಚ್ 22, ಮೂರನೇ ಅತ್ಯುತ್ತಮ ಚಿತ್ರ – ಪಡ್ಡಾಯಿ, ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ – ಹೆಬ್ಬೆಟ್ಟು ರಾಮಕ್ಕ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ರಾಜಕುಮಾರ, ಅತ್ಯುತ್ತಮ ಮಕ್ಕಳ ಚಿತ್ರ – ಎಳೆಯರು ನಾವು ಗೆಳೆಯರು, ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ – ಅಯನ, ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ – ಸೋಫಿಯಾ (ಕೊಂಕಣಿ), ಅತ್ಯುತ್ತಮ ನಟ – ವಿಶೃತ್ ನಾಯ್ಕ (ಚಿತ್ರ – ಮಂಜರಿ), ಅತ್ಯುತ್ತಮ ನಟಿ – ತಾರಾ ಅನುರಾಧ (ಚಿತ್ರ – ಹೆಬ್ಬೆಟ್ಟು ರಾಮಕ್ಕ), ಅತ್ಯುತ್ತಮ ಪೋಷಕ ನಟ – ಮಂಜುನಾಥ ಹೆಗಡೆ , (ಚಿತ್ರ- ಲಕ್ಷ್ಮಿ ನಾರಾಯಣರ ಪ್ರಪಂಚಾನೇ ಬೇರೆ), ಅತ್ಯುತ್ತಮ ಪೋಷಕ ನಟಿ – ರೇಖಾ (ಚಿತ್ರ – ಮೂಕ ನಾಯಕ), ಅತ್ಯುತ್ತಮ ಕಥೆ – ಹನುಮಂತ ಬಿ ಹಾಲಿಗೇರಿ. ( ಚಿತ್ರ – ಕೆಂಗುಲಾಬಿ ), ಅಮರೇಶ ನುಗಡೋಣಿ (ಚಿತ್ರ – ನೀರು ತಂದವರು), ಅತ್ಯುತ್ತಮ ಚಿತ್ರಕಥೆ – ವೆಂಕಟ ಭಾರದ್ವಾಜ್ (ಚಿತ್ರ – ಕೆಂಪಿರ್ವೆ), ಅತ್ಯುತ್ತಮ ಸಂಭಾಷಣೆ – ಪ್ರೋ ಎಸ್ ಜಿ. ಸಿದ್ದರಾಮಯ್ಯ ( ಚಿತ್ರ – ಹೆಬ್ಬೆಟ್ಟು ರಾಮಕ್ಕ), ಅತ್ಯುತ್ತಮ ಛಾಯಾಗ್ರಹಣ. -ಸಂತೋಶ್ ರೈ ಪತಾಜೆ, (ಚಿತ್ರ – ಚಮಕ್), ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ, (ಚಿತ್ರ – ರಾಜಕುಮಾರ), ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮೆ (ಚಿತ್ರ – ಮಫ್ತಿ), ಅತ್ಯುತ್ತಮ ಬಾಲನಟ – ಮಾಸ್ಟರ್ ಕಾರ್ತಿಕ್ (ಚಿತ್ರ – ರಾಮರಾಜ್ಯ), ಅತ್ಯುತ್ತಮ ಬಾಲನಟಿ – ಶ್ಲಾಘ ಸಾಲಿಗ್ರಾಮ (ಚಿತ್ರ – ಕಟಕ).