ಬೆಂಗಳೂರು, ಏ 19 (DaijiworldNews/DB): ಸ್ಪರ್ಧಾತ್ಮಕ ಮತ್ತು ವೃತ್ತಿಪರ ಕೋರ್ಸ್ಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮದರಸಾಗಳಲ್ಲಿ ಶಿಕ್ಷಣ ಇಲಾಖೆಯ ಪಠ್ಯವನ್ನು ಅಳವಡಿಸಲು ಪೋಷಕರು ಮನವಿ ಮಾಡಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ವಿಧಾನಸೌಧದದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದರಸಾ ಶಿಕ್ಷಣದಿಂದ ಮಕ್ಕಳಿಗೆ ಸ್ಪರ್ಧಾತ್ಮಕ ಮತ್ತು ವೃತ್ತಿಪರ ಕೋರ್ಸ್ಗಳ ಪರೀಕ್ಷೆ ಎದುರಿಸಲು ಬೇಕಾಗುವ ಶಿಕ್ಷಣ ದೊರಕುವುದಿಲ್ಲ. ಇತರ ಮಕ್ಕಳಂತೆ ನಮ್ಮ ಮಕ್ಕಳೂ ಈ ಪರೀಕ್ಷೆಗಳನ್ನು ಎದುರಿಸುವಂತಾಗಲು ಮದರಸಾಗಳಲ್ಲಿ ಶಿಕ್ಷಣ ಇಲಾಖೆ ಪಠ್ಯ ಅಳವಡಿಸಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ. ಆದರೆ ಅಧಿಕೃತವಾಗಿ ಮನವಿ ಸಲ್ಲಿಸಿಲ್ಲ ಮತ್ತು ಮದರಸಾ ಹಾಗೂ ಅಲ್ಪಸಂಖ್ಯಾತ ಇಲಾಖೆಯಿಂದ ಮನವಿ ಬಂದಿಲ್ಲ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಗೆ 6,84,255 ವಿದ್ಯಾರ್ಥಿಗಳು
ರಾಜ್ಯದಲ್ಲಿ ಏ. 22 ರಿಂದ 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಒಟ್ಟು 6,84,255 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು 600519 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳು, 61808 ಪುನರಾವರ್ತಿತ, ಖಾಸಗಿಯಾಗಿ ನೋಂದಣಿ ಮಾಡಿರುವ 21928 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಒಟ್ಟು ಪರೀಕ್ಷಾರ್ಥಿಗಳಲ್ಲಿ 3,46.936 ಬಾಲಕರು ಮತ್ತು 3,37,319 ಬಾಲಕಿಯರು ಸೇರಿದ್ದಾರೆ. ಕಲಾ ವಿಭಾಗದಲ್ಲಿ 2.28 167 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2, 45, 519, ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪರೀಕ್ಷಾ ಕೇಂದ್ರದಲ್ಲಿ ಸಿಬಂದಿ ಹಾಗೂ ವಿದ್ಯಾರ್ಥಿಗಳು ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಮುಖ್ಯ ಅಧೀಕ್ಷಕರಿಗೆ ಕ್ಯಾಮರಾ ಹೊಂದಿರದ ಸಾಮಾನ್ಯ ಮೊಬೈಲ್ ಹೊಂದಲು ಅವಕಾಶ ನೀಡಲಾಗಿದೆ. ಪ್ರರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು 2152 ವಿಶೇಷ ಜಾಗೃತ ದಳ ರಚನೆ ಮಾಡಲಾಗಿದ್ದು, ತಾಲೂಕು ಮಟ್ಟದಲ್ಲಿ 858 , ಜಿಲ್ಲಾ ಮಟ್ಟದಲ್ಲಿ 64 ಜಾಗೃತ ದಳಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲದೆ, ವಾಸ ಸ್ಥಳದಿಂದ ಪರೀಕ್ಷಾ ಹಾಜರಾಗಲು ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಗುರುತಿನ ಚೀಟಿ ಮತ್ತು ಪ್ರವೇಶ ಪತ್ರ ತೋರಿಸಿ ಯಾವುದೇ ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.