ಬೆಂಗಳೂರು,ಏ 18 (DaijiworldNews/HR): ಪ್ರತಿಭಟನೆ ಹೆಸರಿನಲ್ಲಿ ಪ್ರತಿದಿನ ಬೀದಿ ನಾಟಕ ಆಡುತ್ತಿದ್ದಾರೆ. ಹಿಂದೆ ಇವರು ಅಧಿಕಾರದಲ್ಲಿದ್ದಾಗ ಹಗರಣಗಳ ಕೆಸರಿನಲ್ಲೇ ಮುಳುಗಿ ಹೋಗಿದ್ದರು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಈಗ ಬೇರೆಯವರ ತಟ್ಟೆಯಲ್ಲಿ ನೋಣ ಹುಡುಕುವ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇತ್ತೀಚೆಗೆ ಸುಳ್ಳುಗಳ ಕಂತೆಯನ್ನೇ ಸತ್ಯ ಎಂದು ಬಿಂಬಿಸುವ ರಾಜಕೀಯ ದೊಂಬರಾಟ ರಾಜ್ಯದಲ್ಲಿ ನಡೆಯುತ್ತಿದೆ. ಆಧಾರ ರಹಿತ, ದಾಖಲೆಗಳೇ ಇಲ್ಲದ ಆರೋಪಗಳ ಮೂಲಕ ಸರ್ಕಾರದ ವರ್ಚಸ್ಸಿಗೆ ಮಸಿ ಬಳೆಯುವ ಮತ್ತು ಸಚಿವರ ತೇಜೋವಧೆ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಇದಕ್ಕಾಗಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆರ್ಟಿಐ ಕಾರ್ಯಕರ್ತರ ಸೋಗಿನಲ್ಲಿರುವ ಕೆಲವರ ಮೂಲಕ ದೂರುಗಳನ್ನು ಕೊಡಿಸಿ ದೊಡ್ಡ ಹಗರಣ, ಭ್ರಷ್ಟಾಚಾರ ನಡೆದಿದೆ ಎಂದು ಬಿಂಬಿಸುವ ಕಸರತ್ತು ನಡೆಯುತ್ತಿದೆ ಎಂದರು.
ಇವರ ಆರೋಪಗಳಲ್ಲಿ ಸತ್ಯಾಂಶ ಇದ್ದಲ್ಲಿ, ದಾಖಲೆಗಳು ಇದ್ದಲ್ಲಿ ಎಸಿಬಿ, ಲೋಕಾಯುಕ್ತ ಇಲ್ಲವೇ ಕೋರ್ಟ್ಗಳಿಗೆ ದೂರು ನೀಡಬಹುದು. ಆದರೆ ಇವರಿಗೆ ಸತ್ಯ ಬೇಕಾಗಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವುದು ಇವರ ಏಕೈಕ ಉದ್ದೇಶ. ರಚನಾತ್ಮಕ ಪ್ರತಿಪಕ್ಷವಾಗಿ ವಿಫಲರಾಗಿರುವ ಕಾಂಗ್ರೆಸ್ ನಾಯಕರ ಕುತಂತ್ರ ರಾಜಕಾರಣ ಇದು ಎಂದಿದ್ದಾರೆ.
ಬಿಜೆಪಿ ಸರರ್ಕಾರ ಬಂದು ಮೂರು ವರ್ಷ ಕಾಂಗ್ರೆಸ್ ನಾಯಕರು ನಿದ್ರಾವಸ್ಥೆಯಲ್ಲಿದ್ದರು. ಚುನಾವಣೆಗೆ ಇನ್ನೇನು ಒಂದು ವರ್ಷ ಇದೆ ಅನ್ನುವಾಗ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂದು ಇಂಥ ವಾಮಮಾರ್ಗ ಹಿಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.