ಬೆಂಗಳೂರು, ಏ 16 (DaijiworldNews/DB): ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ರಾಜ್ಯದ ಆಡಳಿತ ಹಾಳಾಗುತ್ತಿದೆ. ಈಶ್ವರಪ್ಪ ಅವರನ್ನು ರಕ್ಷಣೆ ಮಾಡುವಲ್ಲಿ ಅವರು ನಿರತರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಬೊಮ್ಮಾಯಿ ಅವರ ಬಗ್ಗೆ ನಾನು ಏನೋ ಅಂದುಕೊಂಡಿದ್ದೆ. ಆದರೆ ಈಗ ಆಗುತ್ತಿರುವುದೇ ಬೇರೆ. ಈಶ್ವರಪ್ಪ ವಿರುದ್ದ ಭ್ರಷ್ಟಾಚಾರ ಆರೋಪ ಇದ್ದರೂ ಎಫ್ಐಆರ್ ಹಾಕಿಲ್ಲ. ಅವರೇನು ತಪ್ಪು ಮಾಡಿಲ್ಲ ಎಂಬುದಾಗಿ ತನಿಖೆಗೆ ಮೊದಲೇ ಸಿಎಂ ಮತ್ತು ಬಿಎಸ್ವೈ ಕ್ಲೀನ್ ಚಿಟ್ ನೀಡುತ್ತಿದ್ದಾರೆ ಎಂದು ಆಪಾದನೆ ಮಾಡಿದರು.
ಸಣ್ಣ ಸಣ್ಣ ಗುತ್ತಿಗೆದಾರರಿಂದ ಕಮಿಷನ್ ಪಡೆಯಲು ಆಗುವುದಿಲ್ಲವೆಂದು ದೊಡ್ಡವರಿಗೆ ಗುತ್ತಿಗೆ ನೀಡಿ ಸಣ್ಣ ಸಣ್ಣವರನ್ನು ಮುಗಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಯಾವಾಗಲೂ ಸಣ್ಣ ಗುತ್ತಿಗೆದಾರರ ಪರ ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೀರಶೈವ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಿದ್ದನ್ನು ಶಿವಾಚಾರ್ಯ ಸ್ವಾಮೀಜಿಯವರು ಪ್ರಶಂಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಮ್ಮಮನೆಗೆ ಬಂದಿದ್ದರು. ಸ್ವಾಮೀಜಿಯೊಂದಿಗೆ ಕೆಲ ವಿಚಾರ ಚರ್ಚಿಸಿದ್ದೇನೆ. ಆದರೆ ಅದನ್ನೆಲ್ಲ ಹೇಳಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ಭೇಟಿ ಬಗ್ಗೆ ಕೇಳಲಾದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.