ಬೆಂಗಳೂರು, ಏ 16 (DaijiworldNews/HR): ಬಂಧಿಸಲು ಹೋದ ಕೊಣಾಜೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಶರಣಪ್ಪ ಅವರಿಗೆ ಚಾಕುವಿನಿಂದ ಇರಿದ ಆರೋಪಿಯನ್ನು ಕೊಣಾಜೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಸಾಲೆತ್ತೂರು ಕಾಡುಮಠ ನಿವಾಸಿ ಮಹಮ್ಮದ್ ಸಾದಿಕ್ (23) ಬಂಧಿತ ಆರೋಪಿ.
ಮಾ.23ರಂದು ರಾತ್ರಿ ಅರ್ಕಾನದಲ್ಲಿರುವ ಅತ್ತೆಯ ಮನೆಯಲ್ಲಿ ಸಾದಿಕ್ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪಿಎಸ್ ಐ ಶರಣಪ್ಪ ಮತ್ತು ತಂಡ ಅವರನ್ನು ಬಂಧಿಸಲು ತೆರಳಿದ್ದು, ಸಾದಿಕ್ ಪಿಎಸ್ ಐ ಶರಣಪ್ಪ ಅವರಿಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದರು. ಆತನ ಸಹೋದರ ಸಾದಿಕ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ನಾಸಿರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕೊಣಾಜೆ ಪೊಲೀಸರು ಬೆಂಗಳೂರಿಗೆ ತೆರಳಿ ಮೊಹಮ್ಮದ್ ಸಾದಿಕ್ ಎಂಬಾತನನ್ನು ಎಚ್ಎಸ್ಆರ್ ಲೇಔಟ್ನಲ್ಲಿ ತನ್ನ ಸ್ನೇಹಿತನೊಂದಿಗೆ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸಾದಿಕ್ ಬಂಧನಕ್ಕೆ ಕೊಣಾಜೆ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ, ಪಿಎಸ್ ಐ ಶರಣಪ್ಪ ಭಂಡಾರಿ, ಸಿಬ್ಬಂದಿಗಳಾದ ಅಶೋಕ್, ಶಿವ, ಪುರುಷೋತ್ತಮ, ಉಮೇಶ್ ಕಾರ್ಯಾಚರಣೆಯಲ್ಲಿದ್ದರು. ಎಸಿಪಿ ದಿನಕರ ಶೆಟ್ಟಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ.