ಉತ್ತರಪ್ರದೇಶ, ಏ 16 (DaijiworldNews/MS): ಉತ್ತರ ಪ್ರದೇಶದ ಹಮೀರ್ಪುರ್ನಲ್ಲಿರುವ ಗುಟ್ಕಾ ವ್ಯಾಪಾರಿ ಮನೆ ಹಾಗೂ ಕಾರ್ಖಾನೆಯ ಮೇಲೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಕೋಟಿಗಟ್ಟಲೆ ನಗದು ಮತ್ತು ಚಿನ್ನ ವಶಪಡಿಸಿಕೊಂಡಿದ್ದಾರೆ.
ಏಪ್ರಿಲ್ 12ರ ಮಂಗಳವಾರ ಬೆಳಗ್ಗೆ 6 ಗಂಟೆಗೆ ಸಿಜಿಎಸ್ಟಿಯ ಕಾನ್ಪುರ ತಂಡವು ಹಮೀರ್ಪುರ ಜಿಲ್ಲೆಯ ಸುಮರ್ಪುರ ಪಟ್ಟಣದ ಹಳೆ ಗಲ್ಲಾ ಮಂಡಿಯಲ್ಲಿರುವ ಜಗತ್ ಗುಪ್ತಾ ಅವರ ಮನೆ ಮತ್ತು ಕಾರ್ಖಾನೆಯ ಮೇಲೆ ದಾಳಿ ನಡೆಸಿತು. ಈ ವೇಳೆ 6.31 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಡ್ ಅಡಿಯಲ್ಲಿ ರಾಶಿ ರಾಶಿ ಹಣ ಪತ್ತೆಯಾದ ಹಿನ್ನಲೆಯಲ್ಲಿ ಎಣಿಕೆಗಾಗಿ ಮೂರು ನೋಟು-ಎಣಿಸುವ ಯಂತ್ರಗಳನ್ನು ತರಿಸಿದ್ದಾರೆ . ಬೆಡ್ ಬಾಕ್ಸ್ ಗಳ ಒಳಗಿದ್ದ ಒಟ್ಟು 6 ಕೋಟಿ 31 ಲಕ್ಷದ 11 ಸಾವಿರದ ಎಂಟುನೂರು ರೂಪಾಯಿ ಹಣವನ್ನು ತಂಡ ವಶಪಡಿಸಿಕೊಂಡಿದೆ.
18 ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡ ಅಪಾರ ಪ್ರಮಾಣದ ನಗದನ್ನು ಎಣಿಸಿದ ಬಳಿಕ ದೊಡ್ಡ ದೊಡ್ಡ ಟ್ರಂಕ್ಗಳಲ್ಲಿ ಹಣವನ್ನು ತೆಗೆದುಕೊಂಡು ಹೋಗಲಾಯಿತು. ಏಪ್ರಿಲ್ 12 ರಂದು, ಸಿಜಿಎಸ್ಟಿ ತಂಡವು ಸುಮರ್ಪುರ ನಗರದ ಗುಟ್ಕಾ ವ್ಯಾಪಾರಿ ಜಗತ್ ಗುಪ್ತಾ ಅವರ ಆವರಣದ ಮೇಲೆ ದಾಳಿ ನಡೆಸಿತು. 15 ಸದಸ್ಯರ ತಂಡವು ಬೆಳಿಗ್ಗೆ 6 ಗಂಟೆಗೆ ದಾಳಿಯನ್ನು ಪ್ರಾರಂಭಿಸಿದ್ದು ಇದು ಮರುದಿನ ಸಂಜೆಯವರೆಗೆ ಮುಂದುವರೆಯಿತು.
ಗುಟ್ಕಾ ವ್ಯಾಪಾರಿಯ ಎಲ್ಲಾ ದಾಖಲೆಗಳು, ಬ್ಯಾಂಕ್ ಖಾತೆಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಹೋದರರಾದ ಜಗತ್ ಗುಪ್ತಾ ಮತ್ತು ಪ್ರದೀಪ್ ಗುಪ್ತಾ ಇಬ್ಬರೂ ಬೇರೆ ಬೇರೆ ಸಂಸ್ಥೆಗಳ ಮೂಲಕ ತೆರಿಗೆ ವಂಚಿಸುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.