ಹೊಸಪೇಟೆ, ಏ 16 (DaijiworldNews/DB): ಕಾಂಗ್ರೆಸ್ ನಾಯಕರು ವಿಧಾನಸಭೆಗೆ ಹೋಗಲು ಅರ್ಹರಲ್ಲ. ಅವರೆಲ್ಲ ಜೈಲಲ್ಲೇ ಇರಬೇಕಾದವರು. ಆ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿ ಎಂಬುದಾಗಿ ಸಿಎಂ ಬೊಮ್ಮಾಯಿ ಅವರಲ್ಲಿ ಆಗ್ರಹ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ರಾಜ್ಯಾದ್ಯಂತ ಕಾಂಗ್ರೆಸ್ ಶನಿವಾರ ಆರಂಭಿಸಿರುವ ಪಾದಯಾತ್ರೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವೀಡಿಯೋ ದಾಖಲೆ ಇದ್ದರೂ ಸಿದ್ದರಾಮಯ್ಯ ಸರ್ಕಾರ ಕೆ.ಜೆ. ಜಾರ್ಜ್ ಅವರನ್ನು ಬಂಧಿಸಿಲ್ಲ. ಘಟನೆ ನಡೆದು ಏಳು ತಿಂಗಳ ಬಳಿಕ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು. ಆದರೆ ಪ್ರಸ್ತುತ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ವಾಟ್ಸಾಪ್ ಮೆಸೇಜ್ನಲ್ಲಷ್ಟೇ ಆರೋಪವಿದ್ದರೂ ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದರು.
ಕಾಂಗ್ರೆಸ್ನ ಪ್ರಸ್ತುತ ನಡೆಯನ್ನು ನೋಡಿದರೆ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕೈವಾಡದ ಸಂಶಯ ಬರುತ್ತದೆ. ಅವರ ಪ್ರೇರಣೆ ಇದಕ್ಕಿದೆ ಎಂಬ ಅನುಮಾನವಿದೆ. ಅವರ ಚಟುವಟಿಕೆಗಳು ಇಡೀ ಪ್ರಕರಣವನ್ನು ತಿರುಚುವುದರ ಹಿಂದಿದೆ ಎಂದವರು ಇದೇ ವೇಳೆ ಆರೋಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ 23 ಹತ್ಯೆಗಳು ಘಟಿಸಿವೆ. ಬಂಟ್ವಾಳದ ಶರತ್ ಮಡಿವಾಳ ಹತ್ಯೆಯಾದ ಎರಡು ದಿನ ಸಾವನ್ನು ಘೋಷಿಸಲು ಬಿಡದೆ ಮುಚ್ಚಿಟ್ಟರು. ಹೊನ್ನಾವರದಲ್ಲಿ ಪರೇಶ್ ಮೇಸ್ತನ ಹತ್ಯೆ ಪ್ರಕರಣದಲ್ಲೂ ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ಎರಡು ದಿನ ಶವ ಹೊರ ತೆಗೆಯಲು ಬಿಡಲಿಲ್ಲ. ಈ ರೀತಿ ನಡೆಗಳಿಂದ ಅವರು ಕೊಲೆಗಡುಕ ಎಂದಾಯಿತಲ್ಲವೇ ಎಂದು ಪ್ರಶ್ನಿಸಿದರು.