ಬೆಂಗಳೂರು, ಏ 16 (DaijiworldNews/DB): ಕಮಿಷನ್ ಬಗ್ಗೆ ಮಾತನಾಡುವವರ ನಿಜಸ್ವರೂಪ ಏನು ಎಂಬುದು ಜನರಿಗೆ ಗೊತ್ತಾಗಿದೆ. ಅವರ ಬೀರುವಿನಲ್ಲಿ ಭ್ರಷ್ಟಾಚಾರದ ಅಸ್ತಿಪಂಜರ ಎಷ್ಟಿದೆ ಎಂಬುದನ್ನು ನೋಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಆರ್.ಟಿ. ನಗರದ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾತ್ರೆಗೆ ಹೊರಟಿರುವವರು ಬಹಳ ಶುದ್ಧಹಸ್ತರಂತೆ. ಆ ಶುದ್ದ ಹಸ್ತದವರು ಕಮಿಷನ್ ಬಗ್ಗೆ ಮಾತನಾಡುತ್ತಾರೆ. ಅವರ ಬೀರುವಿನಲ್ಲಿರುವ ಭ್ರಷ್ಟಾಚಾರದ ಅಸ್ಥಿಪಂಜರ ಲೆಕ್ಕ ಹಾಕಲಿ ಎಂದರು.
ಈಗ ಸಂತೋಷ್ ಆತ್ಮಹತ್ಯೆ ಪ್ರಕರಣ ತನಿಖಾ ಹಂತದಲ್ಲಿದೆ. ಪ್ರಾಥಮಿಕ ವರದಿ ಬಂದ ಬಳಿಕ ನಿಜಾಂಶ ಗೊತ್ತಾಗಲಿದೆ. ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ನೋಟ್, ವೀಡಿಯೋ ಎರಡೂ ಇತ್ತು. ಆದರೆ ಅವರ ಮನೆಯವರು ಕೋರ್ಟ್ಗೆ ಹೋಗಿದ್ದರಿಂದ ಕೆ.ಜೆ. ಜಾರ್ಜ್ ಮೇಲೆ ಎಫ್ಐಆರ್ ದಾಖಲಿಸಲಾಯಿತು. ಕೋರ್ಟ್ ಆದೇಶ ಬರುವುದಕ್ಕೂ ಮುನ್ನ ಎಫ್ಐಆರ್ ಕೂಡಾ ಮಾಡಿರಲಿಲ್ಲ. ಸಂತೋಷ್ ಪ್ರಕರಣದಲ್ಲಿ ಮನೆಯವರ ದೂರಿಗೆ ಬೆಲೆ ಕೊಟ್ಟು ತನಿಖೆ ನಡೆಸಲಾಗುತ್ತಿದೆ ಎಂದವರು ಇದೇ ವೇಳೆ ತಿಳಿಸಿದರು.
ಕಾಂಗ್ರಸ್ನವರು ಏನೆಲ್ಲಾ ಮಾಡಿದ್ದಾರೆಂಬುದು ಜನರಿಗೆ ಗೊತ್ತಿದೆ. ಕಾನೂನು ಪ್ರಕಾರವೇ ನಾವು ಹೋಗುತ್ತೇವೆ ಹೊರತು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಅದರ ವರದಿ ಬಂದ ಬಳಿಕ ಸಿಐಡಿಗೆ ವಹಿಸುವ ಅವಶ್ಯಕತೆಯ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.