ಕೊರಟಗೆರೆ, ಏ 14 (DaijiworldNews/DB): ರಾಜಕೀಯವಾಗಿ ಡಿಸಿಎಂ ಸ್ಥಾನದವರೆಗೂ ಸಾಗಿದರೂ ಇನ್ನೂ ನಾನು ದಲಿತ ಎಂಬ ಕಾರಣಕ್ಕೆ ದೇವಸ್ಥಾನಗಳಲ್ಲಿ ಪ್ರವೇಶ ಕಲ್ಪಿಸುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯತ್ ಮುಂಭಾಗ ಗುರುವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ಬಾರಿ ಶಾಸಕನಾಗಿ, ಮಂತ್ರಿಯಾಗಿ, ಉಪ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದೇನೆ. ಅಲ್ಲದೆ, ಅತ್ಯುನ್ನತ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡಿದ್ದೇನೆ. ನಾನಾ ದೇಶಗಳನ್ನು ಸುತ್ತಿ ಬಂದಿದ್ದೇನೆ. ಆದರೆ ನಾನೊಬ್ಬ ದಲಿತ ಎಂಬ ಕಾರಣಕ್ಕಾಗಿ ದೇವಸ್ಥಾನಗಳಲ್ಲಿ ಒಳ ಪ್ರವೇಶಕ್ಕೆ ಬಿಡುವುದಿಲ್ಲ. ಅಸ್ಪೃಶ್ಯತೆ ಸಂಪೂರ್ಣವಾಗಿ ಇನ್ನೂ ತೊಲಗದಿರುವುದು ವಿಷಾದನೀಯ ಎಂದರು.
ದೇವಳಗಳಿಗೆ ತೆರಳಿದರೆ ಅಲ್ಲಿ ಎಲ್ಲಿ ಒಳಗಡೆ ಪ್ರವೇಶಿಸುತ್ತೇನೋ ಎಂಬ ಆತಂಕದಿಂದ ಸ್ವಲ್ಪ ನಿಂತುಕೊಳ್ಳಿ, ಮಂಗಳಾರತಿ ತರುತ್ತೇನೆ ಎನ್ನುತ್ತಾರೆ. ರಾಜ್ಯದಲ್ಲಿ ಇನ್ನೂ ಇಂತಹ ಪರಿಸ್ಥಿತಿ ನಿಂತಿಲ್ಲ ಎಂದು ಬೇಸರಿಸಿದರು.