ನವದೆಹಲಿ, ಏ 14 (DaijiworldNews/DB): ಇಂಡಿಯನ್ ಏರ್ಲೈನ್ಸ್ 814 ವಿಮಾನವನ್ನು 1999ರಲ್ಲಿ ಹೈಜಾಕ್ ಮಾಡಿ ಬಂಧಿಸಲ್ಪಟ್ಟು ಬಳಿಕ ಬಂಧಮುಕ್ತನಾಗಿದ್ದ ಮುಸ್ತಾಕ್ ಅಹ್ಮದ್ ಝರ್ಗರ್ನನ್ನು ಕೇಂದ್ರ ಸರ್ಕಾರ ಭಯೋತ್ಪಾದಕ ಎಂಬುದಾಗಿ ಘೋಷಿಸಿದೆ.
ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಯಾವುದೇ ವ್ಯಕ್ತಿಯನ್ನೂ ಉಗ್ರ ಎಂದು ಪರಿಗಣಿಸಿ ವಿಚಾರಣೆ ನಡೆಸಲು ಅವಕಾಶ ಕಲ್ಪಿಸುವ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯಿದೆಯಡಿ ಕೇಂದ್ರ ಸರ್ಕಾರ ಈತನ ವಿರುದ್ಧ ಕ್ರಮ ಕೈಗೊಳ್ಳಲಿದೆ.
1999ರ ಡಿಸೆಂಬರ್ 24ರಂದು ಕಠ್ಮಂಡುವಿನಿಂದ ನವದೆಹಲಿಗೆ ಸಂಚರಿಸುತ್ತಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನ ಐಸಿ-814ನ್ನು ಮಾಸ್ಕ್ ಧರಿಸಿದ್ದ ಐವರು ಭಯೋತ್ಪಾದಕರು ಹೈಜಾಕ್ ಮಾಡಿ ಅಪಘಾನಿಸ್ತಾನದ ಕಂದಹಾರ್ಗೆ ಕೊಂಡೊಯ್ದಿದ್ದರು. ಈತ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಹೈಜಾಕ್ ಮಾಡಿದ ಮೂವರು ಭಯೋತ್ಪಾದಕರಲ್ಲಿ ಓರ್ವನಾಗಿದ್ದಾನೆ. ಈತನೊಂದಿಗಿದ್ದ ಮಸೂದ್ ಅಝ್ಹರ್ ಮತ್ತು ಅಹ್ಮದ್ ಒಮರ್ ಕೂಡಾ ಬಿಡುಗಡೆಗೊಂಡಿದ್ದರು.
52 ವರ್ಷದ ಮುಸ್ತಾಕ್ ಶ್ರೀನಗರದ ನೌಹಟ್ಟ ಜಮಾ ಮಸೀದಿ ಬಳಿಯ ನಿವಾಸಿಯಾಗಿದ್ದು, ಆಲ್ ಉಮರ್-ಮುಜಾಹಿದ್ದೀನ್ ಸಂಘಟನೆಯ ಸ್ಥಾಪಕ ಮತ್ತು ಮುಖ್ಯ ಕಮಾಂಡರ್ ಆಗಿದ್ದ. ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂಬುದಾಗಿ ಪಟ್ಟಿ ಮಾಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ವಿಮೋಚನೆ ವಿಚಾರದಲ್ಲಿ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಅಲ್ಲದೆ, ಕಾನೂನುಬಾಹಿರ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳಲು ಪಾಕಿಸ್ತಾನಕ್ಕೆ ತೆರಳಿದ್ದ.
ಭಯೋತ್ಪಾದಕ ಸಂಘಟನೆಗಳಾದ ಅಲ್-ಖೈದಾ ಮತ್ತು ಜೈಶ್ ಎ ಮೊಹಮ್ಮದ್ ಸಂಘಟನೆಗಳೊಂದಿಗೆ ಈತ ನಿಕಟ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಶಾಂತಿ ಸಾಮರಸ್ಯಕ್ಕೆ ಈತನಿಂದ ಧಕ್ಕೆಯಾಗುವ ಸಂಭವವೂ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.