ಬೆಂಗಳೂರು, ಏ 14 (DaijiworldNews/DB): ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿಯಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.
ಕೈ ನಾಯಕರ ವಿರುದ್ದ ಜಮೀರ್ ಅಹ್ಮದ್ ಖಾನ್ ಅವರಿಗೆ ಕೆಲ ಸಮಯಗಳ ಹಿಂದೆಯೇ ಅಸಮಾಧಾನವಿದ್ದು, ಕಾಂಗ್ರೆಸ್ ನಾಯಕರಿಂದ ಅಂತರವನ್ನೂ ಕಾಯ್ದುಕೊಳ್ಳುತ್ತಿದ್ದಾರೆ. ಬುಧವಾರ ರಾತ್ರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿಯಾಗಿ ತನ್ನ ಅಸಮಾಧಾನ ತೋಡಿಕೊಂಡಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಈ ಭೇಟಿ ನಡೆದಿದೆ.
ಜಮೀರ್ ಈ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಯಾವುದೇ ಸಭೆಗಳಿಗೆ ಆಮಂತ್ರಣವಿದ್ದರೂ ಹಾಜರಾಗಿಲ್ಲ. ಆ ಮೂಲಕ ಪಕ್ಷದ ನಾಯಕರ ಮೇಲೆ ತಮಗೆ ಅಸಮಾಧಾನ ಇದೆ ಎಂದು ಪರೋಕ್ಷವಾಗಿ ತೋರಿಸಿಕೊಂಡಿದ್ದರು. ಇದೀಗ ನಾಯಕನ ಭೇಟಿ ಮಾಡುವ ಮೂಲಕ ಅದನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮುಸ್ಲಿಂ ಸಮುದಾಯದ ಮೇಲೆ ಹಲವು ಅನ್ಯಾಯಗಳು ನಡೆಯುತ್ತಿದೆ. ಆದರೆ ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ.