ಬೆಂಗಳೂರು, ಏ 14 (DaijiworldNews/MS): ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರಾಥಮಿಕ ಹಂತದ ತನಿಖೆಯ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಕೇಸ್ ನ ಸಂಪೂರ್ಣ ತನಿಖೆ ನಡೆಯಲಿ. ಪ್ರಾಥಮಿಕ ಹಂತದ ವರದಿ ಬರುವವರೆಗೂ ಯಾವುದೇ ಕ್ರಮಗಳಿಲ್ಲ ವರದಿ ಬರುವವರೆಗೂ ಯಾರ ರಾಜೀನಾಮೆ ಇಲ್ಲ ಎಂದು ಮುಖ್ಯಮಂತ್ರಿಗಳು ಪರೋಕ್ಷವಾಗಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಕುರಿತು ಹೇಳಿದರು.
ಸಚಿವ ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಪ್ರತಿಭಟನೆ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ. ಅವರು ಅಧಿಕಾರದಲ್ಲಿದ್ದಾಗ ಹಲವು ಕೊಲೆಗಳಾದವು. ಕೊಲೆಗಳನ್ನು ಮಾಡಿದವರ ವಿರುದ್ಧ ಕೇಸ್ ಗಳನ್ನು ಪಾಪಸ್ ಪಡೆದಿದರು. ಇದರಿಂದ ಆಗ ಅರಾಜಕತೆ ಉಂಟಾಗಿತ್ತು. ಇದಕ್ಕಾಗಿ ಜನ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದರು. ಕಾಂಗ್ರೆಸ್ನವರು ಈಗ ಕೇವಲ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಸಂತೋಷ್ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತದೆ. ಶೀಘ್ರದಲ್ಲೇ ಸತ್ಯ ಹೊರಗೆ ಬರುತ್ತದೆ ಎಂದು ತಿಳಿದರು.