ವಿಜಯಪುರ, ಏ 13 (DaijiworldNews/DB): ಮುಖ್ಯಮಂತ್ರಿ ಆಗುವ ಅರ್ಹತೆ ನನಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮನಸು ಮಾಡಿದರೆ ನಾನು ಸಿಎಂ ಆಗಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ನಾನು ಸಿಎಂ ಆಗಬಾರದಾ? ನನಗೂ ಸಿಎಂ ಆಗುವ ಎಲ್ಲಾ ಅರ್ಹತೆಗಳಿವೆ. ಹಾಗಾಗಿ ಖಂಡಿತಾ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುತ್ತೇನೆ ಎಂದರು.
ಗಣಿ, ಅಕ್ರಮ ಆಸ್ತಿ, ಭ್ರಷ್ಟಾಚಾರ ಸೇರಿದಂತೆ ಯಾವುದೇ ಆರೋಪಗಳು ನನ್ನ ಮೇಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮನಸು ಮಾಡಿದರೆ ಖಂಡಿತ ನಾನು ಮುಖ್ಯಮಂತ್ರಿ ಆಗುವುದರಲ್ಲಿ ಸಂದೇಹವಿಲ್ಲ. ಬಿಜೆಪಿಗೆ 130 ಸೀಟು ದೊರಕಿಸಿಕೊಡುವ ತಾಕತ್ತು ನನಗಿದೆ. ವರಿಷ್ಠರು ಜವಾಬ್ದಾರಿ ನೀಡಿದರೆ ಚುನಾವಣೆಯ ಹೊರೆ ಹೊರಲು ನಾನು ಸಿದ್ಧ ಎಂದವರು ಇದೇ ವೇಳೆ ತಿಳಿಸಿದರು.