ಹೈದರಾಬಾದ್, ಏ 13 (DaijiworldNews/DB): ಹತ್ತು ವರ್ಷಗಳ ಹಿಂದೆ ತೆಲಂಗಾಣ ಶಾಸಕ ಅಕ್ಬರುದ್ದೀನ್ ಒವೈಸಿ ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣದ ಕುರಿತ ಎರಡು ಪ್ರಕರಣಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಕೋಮು ಪ್ರಚೋದನೆ ನೀಡುವ ಯಾವುದೇ ಅಂಶಗಳು ಭಾಷಣದಲ್ಲಿ ಇಲ್ಲ ಎಂಬುದಾಗಿ ಪ್ರಾಸಿಕ್ಯೂಷನ್ ಕೋರ್ಟ್ ಗೆ ಸಲ್ಲಿಸಿರುವ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಲಾಗಿತ್ತು. ಇದೀಗ ನ್ಯಾಯಾಲಯವು ಅಂತಿಮ ತೀರ್ಪು ನೀಡಿದ್ದು, ಎರಡೂ ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಮಾಧ್ಯಮಗಳ ವರದಿಗಳು ಹೇಳಿವೆ.
ಎರಡು ಧರ್ಮಗಳ ನಡುವೆ ಕೋಮು ವೈಷಮ್ಯ ಹುಟ್ಟು ಹಾಕುವ ಭಾಷಣವನ್ನು ಒವೈಸಿ ಮಾಡಿದ್ದರು ಮತ್ತು ಕ್ರಿಮಿನಲ್ ಸಂಚು ನಡೆಸಿದ್ದರು ಎಂಬುದಾಗಿ 2012ರಲ್ಲಿ ನಿಜಾಮಾಬಾದ್ ಮತ್ತು ನಿರ್ಮಲ್ ಪ್ರದೇಶದಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣಗಳಲ್ಲಿ ಹಲವಾರು ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಪ್ರಕರಣಗಳನ್ನು ಹೈದರಾಬಾದ್ ನ್ಯಾಂಪಲ್ಲಿ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಅಲ್ಲದೆ, ಪ್ರಕರಣ ದಾಖಲಾದ ಬಳಿಕ ಒವೈಸಿಯನ್ನು ಪೊಲೀಸರು ಬಂಧಿಸಿ ಸುಮಾರು 40ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿದ್ದರು.